
ಧಾರವಾಡ: ‘ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಡಿ.ಜೆ ಹಚ್ಚಲು ಪೊಲೀಸರು ತಡೆಯೊಡಿದ್ದರೆ, ಪ್ರತಿಭಟನೆ ಮಾಡುತ್ತೇವೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಡಿ.ಜೆ ಹಚ್ಚಿದಾಗ ಪೊಲೀಸರು ಕ್ರಮಜರುಗಿಸಿದರೆ ಗಣೇಶಮೂರ್ತಿಯನ್ನು ಅಲ್ಲಿಯೇ ಇಟ್ಟು ಪ್ರತಿಭಟನೆ ಮಾಡುತ್ತೇವೆ’ ಎಂದು ಉತ್ತರಿಸಿದರು.
‘ಗಣೇಶ ಮೂರ್ತಿ ಪ್ರತಿಷ್ಠಾಪನೆ ದಿನ ಮ್ಯೂಸಿಕ್ (ಹಚ್ಚಿದ) ವಿಚಾರಕ್ಕೆ ಯುವಕ ಪ್ರದೀಪ್ ಎಂಬಾತನನ್ನು ವಿದ್ಯಾಗಿರಿಯ ಠಾಣೆ ಇನ್ಸ್ಪೆಕ್ಟರ್ ಥಳಿಸಿದ್ದಾರೆ. ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲಿಸುವಂತೆ ಯುವಕನಿಗೆ ತಿಳಿಸಿದ್ದೇನೆ. ಆ ಇನ್ಸ್ಪೆಕ್ಟರ್ ಅಮಾತುಗೊಳಿಸಬೇಕು ಮತ್ತು ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪೊಲೀಸ್ ಆಯುಕ್ತರನ್ನು ಆಗ್ರಹಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
‘ಕಾಂಗ್ರೆಸ್ ಸರ್ಕಾರದ ನಿರ್ದೇಶನ ಮೇರೆಗೆ ಪೊಲೀಸರು ಗಣೇಶೋತ್ಸವ ವಿಚಾರದಲ್ಲಿ ಬಹಳಷ್ಟು ಅನ್ಯಾಯದಲ್ಲಿ ತೊಡಗಿದ್ಧಾರೆ. ಪೊಲೀಸರ ಈ ರೀತಿಯ ದುರ್ವರ್ತನೆ, ದಬ್ಬಾಳಿಕೆ ಸಹಿಸುವುದಿಲ್ಲ. ರಾಜ್ಯದಲ್ಲಿ ಚುನಾವಣೆಯಲ್ಲಿ ಬಿಜೆಪಿ ಸೋತಿರಬಹುದು. ಆದರೆ, ಹೋರಾಟ ಮಾಡಲು ನಾವು ಗಟ್ಟಿ ಇದ್ದೇವೆ. ಬಿಜೆಪಿ ಕಾರ್ಯಕರ್ತರು, ಗಣಪತಿ ಇತ್ಯಾದಿ ಹಿಂದೂ ಚಟುವಟಿಕೆಗಳನ್ನು ಕಾಂಗ್ರೆಸ್ ಸರ್ಕಾರ ಗುರಿಯಾಗಿಸಿಕೊಂಡಿದೆ’ ಎಂದು ದೂರಿದರು.
‘ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಯಾವುದೇ ತಂತ್ರಗಾರಿಕೆ ಮಾಡಿದರೂ ಎಲ್ಲ ಸಂಸದರು ಜೊತೆಗಿರುತ್ತೇವೆ. ರಾಜ್ಯದ ನೆಲ, ಜಲ ರಕ್ಷಣೆಗೆ ಸದಾ ಬದ್ಧ’ ಎಂದರು.
‘ದೇಶಕ್ಕೆ ಸ್ವಾತಂತ್ರ್ಯ ಸಂದು 76 ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ದೇಶದಾದ್ಯಂತ ‘ನನ್ನ ದೇಶ ನನ್ನ ಮಣ್ಣು’ ಕಾರ್ಯಕ್ರಮ ನಡೆಯುತ್ತಿದೆ. ಪ್ರಧಾನಿ ಮೋದಿ ಅವರ ಕರೆ ಮೇರೆಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸಿ ದೆಹಲಿಗೆ ಒಯ್ದು ‘ವಾರ್ ಮೆಮೊರಿಯಲ್’ ಪಕ್ಕ ಗುರುತಿಸಿರುವ ಜಾಗದಲ್ಲಿ ಹಾಕಿ ಅಲ್ಲಿ ಗಿಡಗಳನ್ನು ನೆಡಲಾಗುವುದು. ಈ ಭಾವನಾತ್ಮಕ ಕಾರ್ಯಕ್ರಮವನ್ನು ಸತ್ತೂರಿನಲ್ಲಿ ನೆರವೇರಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.