ಕುಂದಗೋಳ ತಾಲ್ಲೂಕಿನ ಗೌಡಗೇರಿ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ದೇವಾಲಯ
ಗುಡಗೇರಿ: ಕುಂದಗೋಳ ತಾಲ್ಲೂಕಿನ ಗೌಡಗೇರಿಯ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯಡಿ ಸಂದಾಯವಾದ ಹಣದಲ್ಲಿ ₹1.10 ಲಕ್ಷವನ್ನು ದ್ಯಾಮವ್ವ ದೇವಿ ದೇವಾಲಯದ ಗೋಪುರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ.
‘ದ್ಯಾಮವ್ವ ದೇವಿ ಗೋಪುರ ನಿರ್ಮಾಣಕ್ಕೆ ಅನೇಕರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡಿದ್ದಾರೆ. ಗ್ರಾಮದ ಅನೇಕ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ₹2 ಸಾವಿರವನ್ನು ಪ್ರತಿ ತಿಂಗಳು ದೇಣಿಗೆಯಾಗಿ ಸಲ್ಲಿಸುತ್ತಿದ್ದು, ₹1.10 ಲಕ್ಷ ಸಂಗ್ರಹವಾಗಿದೆ’ ಎಂದು ದೇವಸ್ಥಾನ ಸಮಿತಿ ಸದಸ್ಯ ಉದ್ದನಗೌಡ ಸಣ್ಣಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗೋಪುರ ನಿರ್ಮಾಣಕ್ಕೆ ಗೃಹಲಕ್ಷ್ಮಿ ಯೋಜನೆಯ ಒಂದು ತಿಂಗಳ ಹಣ ನೀಡಲು ಎಲ್ಲಾ ಮಹಿಳೆಯರು ನಿರ್ಧರಿಸಿದ್ದೇವೆ. ಇನ್ನೂ ಹಲವರು ಕೊಡುತ್ತಾರೆ’ ಎಂದು ಯಲ್ಲವ್ವ ಮತ್ತೂರ ಹೇಳಿದರು.
‘ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅನೇಕರಿಗೆ ಆಸರೆಯಾಗಿದೆ. ಮಹಿಳೆಯರು ಈ ಯೋಜನೆ ಹಣವನ್ನು ಕುಟುಂಬ ನಿರ್ವಹಣೆಯೊಂದಿಗೆ ಸಮಾಜದ ಕಾರ್ಯಕ್ಕೂ ನೀಡುತ್ತಿರುವುದು ಉತ್ತಮ ಕಾರ್ಯ’ ಎಂದು ಪಂಚ ಗ್ಯಾರಂಟಿ ಯೋಜನೆ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾನಂದ ಬೆಂತೂರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.