
ಕಲಘಟಗಿ: ಯುವ ಸಮೂಹ ಕ್ರೀಡೆಯಲ್ಲಿ ಭಾಗವಹಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕ್ಷೇತ್ರವ್ಯಾಪ್ತಿಯಲ್ಲಿ ಕ್ರೀಡಾ ಉತ್ಸವ ಆಯೋಜಿಸಿದ್ದಾರೆ ಎಂದು ಬಿಜೆಪಿ ಮುಖಂಡ ನಾಗರಾಜ ಛಬ್ಬಿ ಹೇಳಿದರು.
ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದರು.
ಪಟ್ಟಣದ ಹನ್ನೆರಡು ಸಾವಿರ ಮಠದ ಎದುರುಗಡೆಯ ಮೈದಾನದಲ್ಲಿ ಜ.3,4ರಂದು ಎರಡು ದಿನಗಳ ಕಾಲ ಕ್ರೀಡಾ ಉತ್ಸವ ಜರುಗಲಿವೆ.
ಗುಂಪು ಆಟಗಳಾದ ಕಬಡ್ಡಿ, ಕೊಕ್ಕೊ ,ವಾಲಿಬಾಲ್ ಪ್ರಥಮ ಬಹುಮಾನ ₹30 ಸಾವಿರ, ದ್ವಿತೀಯ ₹20 ಸಾವಿರ, ಮೂರು ಹಾಗೂ ನಾಲ್ಕನೇ ತಲಾ ₹10 ಸಾವಿರ ಹಾಗೂ ಆಕರ್ಷಕ ಟ್ರೋಫಿ ಇರಲಿದೆ. ವೈಯಕ್ತಿಕ ಆಟಗಳಾದ 100 ಮೀಟರ್ ಓಟ, 800 ಮೀಟರ್ ಓಟ, ಎತ್ತರ ಜಿಗಿತ, ಉದ್ದ ಜಿಗಿತ, ಗುಂಡು ಎಸೆತಗಳಿಗೆ ಪ್ರಥಮ ₹7 ಸಾವಿರ, ದ್ವಿತೀಯ ₹5 ಸಾವಿರ, ತೃತೀಯ ₹3 ಸಾವಿರ ಹಾಗೂ ಆಕರ್ಷಕ ಮೆಡಲ್ ನೀಡಲಾಗುವುದು ಎಂದರು.
ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳು ಕ್ರೀಡಾಕೂಟಗಳಿಂದ ವಂಚಿತರಾಗಬಾರದು ಎನ್ನುವ ದೃಷ್ಟಿಯಿಂದ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ. ಯುವ ಪ್ರತಿಭೆಗಳು ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಒಳ್ಳೆಯ ವೇದಿಕೆಯಾಗಿದೆ ಎಂದರು.
ಕ್ರೀಡಾ ಉತ್ಸವದ ಕರಪತ್ರಗಳನ್ನ ಆಟದ ಮೈದಾನದಲ್ಲಿ ಬಿಡುಗಡೆಗೊಳಿಸಿದರು. ಆಟಗಾರರಿಗೆ ಸಮವಸ್ತ್ರ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕ ಅಧ್ಯಕ್ಷ ಯಲ್ಲಾರಿ ಶಿಂಧೆ, ಮುಖಂಡರಾದ ಕಿರಣಪಾಟೀಲ್ ಕುಲಕರ್ಣಿ, ಐ.ಸಿ ಗೋಕುಲ, ಬಸವರಾಜ ಶೆರೇವಾಡ, ಮಹಾತೇಶ ತಹಶೀಲ್ದಾರ್, ಅಶೋಕ ಆಡಿನವರ, ಸುರೇಶ ಶೀಲವಂತರ, ಶಿವಲಿಂಗಪ್ಪ ಯಲಿವಾಳ,ಸಂತೋಷ್ ಮಾದನಬಾವಿ, ಪರಶುರಾಮ ರಜಪೂತ, ಶ್ರೀಕಾಂತ್ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.