ನರಗುಂದ: `ರಾಜ್ಯದಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣವನ್ನು ಗುಣಾತ್ಮಾಕವಾಗಿ ನೀಡುವ ಮೂಲಕ ವಿಶೇಷ ಕಾಳಜಿ ವಹಿಸಲಾಗುತ್ತಿದ್ದು, ಅವುಗಳ ಸುಧಾರಣೆಗೆ ವಿಶೇಷ ಕ್ರಮ ಕೈಗೊಂಡು ಹೊಸ ರೂಪ ನೀಡಲಾಗುವುದು~ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ತಾಲ್ಲೂಕಿನ 117 ಅಂಗನವಾಡಿ ಕೇಂದ್ರಗಳಿಗೆ ಸಮರೋಪಾದಿಯಲ್ಲಿ ಭೇಟಿ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು,
ಭೇಟಿ ನೀಡುವ ಕಾರ್ಯಕ್ರಮಕ್ಕೆ ಕಾರ್ಯದರ್ಶಿ, ಉಪನಿರ್ದೇಶಕ ರನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು, ಮೇಲ್ವಿಚಾರಕಿಯರು ಸಮರೋಪಾ ದಿಯಲ್ಲಿ ಭೇಟಿ ನೀಡಿ ವಾಸ್ತವ ಸ್ಥಿತಿ ಅರಿಯಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಈಗಾಗಲೇ ರಾಜ್ಯದ 11 ಜಿಲ್ಲೆಗಳ 25 ತಾಲ್ಲೂಕುಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಲಾಗಿದೆ. 26 ನೇ ತಾಲ್ಲೂಕಾಗಿ ಗದಗ ಜಿಲ್ಲೆಯಲ್ಲಿ ಪ್ರಥಮವಾಗಿ ಆರಂಭ ಮಾಡಲಾ ಗುತ್ತಿದೆ ಒಂದೇ ದಿನದಲ್ಲಿ ಐದು ತಾಲ್ಲೂಕುಗಳ ಅಧಿಕಾರಿಗಳು, ಮೇಲ್ವಿಚಾರಕಿಯರು ಸೇರಿಕೊಂಡು ಎಲ್ಲ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿಯ ವಾಸ್ತವ ಸ್ಥಿತಿ ಅಧ್ಯಯನ ಮಾಡಿ ನಿಖರ ವರದಿ ಸಲ್ಲಿಸಬೇಕು ಎಂದರು.
ಬಾಲ ಸಂಜೀವಿನಿ: ಭಾರತದಲ್ಲಿಯೇ `ಬಾಲ ಸಂಜೀವಿನಿ~ ಯೋಜನೆಯನ್ನು ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಪ್ರಥಮ ಬಾರಿಗೆ ಜಾರಿಗೊಳಿಸಿದ್ದು. ಅಂಗನವಾಡಿ ಕಾರ್ಯಕರ್ತೆಯರು ಪ್ರಚಾರ ಪಡಿಸಿ ಹೆಚ್ಚಿನ ಮಾಹಿತಿ ಜನರಿಗೆ ತಿಳಿಸಬೇಕು ಎಂದರು.
ಈ ಯೋಜನೆಯಡಿ 0-6 ವರ್ಷದ ಮಕ್ಕಳಿಗೆ ಗಂಭೀರ ಕಾಯಿಲೆಗಳಿಗೆ ಸಂಬಂಧಿಸಿದಂತೆ ಉಚಿತ ಚಿಕಿತ್ಸೆ ನೀಡಲಾಗುವುದು. ಆದ್ದರಿಂದ ಇದರ ಬಗ್ಗೆ ಹೆಚ್ಚಿನ ಪ್ರಚಾರ ಅಗತ್ಯ. ಜಿಲ್ಲೆಯಿಂದ ಕೇವಲ ನಾಲ್ಕು ಮಕ್ಕಳನ್ನು ಮಾತ್ರ ಒಳಪಟ್ಟಿದ್ದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಲಕ್ಷ್ಮಿಕಾಂತಮ್ಮ ಮಾತನಾಡಿ `ಸಮರೋಪಾದಿ ಭೇಟಿ ಕಾರ್ಯಕ್ರಮದಲ್ಲಿ ತಾಲ್ಲೂಕು ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಏಕಕಾಲಕ್ಕೆ ವಿವಿಧ ತಂಡಗಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿಯ ಮೂಲ ಸೌಕರ್ಯದ ವ್ಯವಸ್ಥೆ, ಕಟ್ಟಡದ, ವೈಯಕ್ತಿಕ ಸ್ವಚ್ಛತೆ ಹಾಗೂ ಗರ್ಭಿಣಿ ತಾಯಂದಿರ ಆರೋಗ್ಯ ಸೇರಿದಂತೆ ಎಲ್ಲ ಮಾಹಿತಿ ಸಂಗ್ರಹಿಸಿ ಮೇಲಾಧಿಕಾ ರಿಗಳಿಗೆ ವರದಿ ಸಲ್ಲಿಸಲಾಗುವುದಾಗಿದೆ ಎಂದರು.
ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಾರದಾ ಹಿರೇಗೌಡರ, ಜಿ.ಪಂ ಸದಸ್ಯರಾದ ಎಂ.ಎಸ್. ಪಾಟೀಲ, ಶಾಂತವ್ವ ದಂಡಿನ, ತಾಪಂ ಅಧ್ಯಕ್ಷ ಮಲ್ಲಪ್ಪ ಮೇಟಿ, ತಾಪಂ ಅಧಿಕಾರಿ ಬಿ.ವಿ. ಪಾಟೀಲ, ಜಿಲ್ಲಾ ಶಿಶು ಅಭಿವೃದ್ಧಿ ನಿರ್ವಹಣಾಧಿಕಾರಿ ಪಾಂಚಾಳ ಹಾಗೂ ರೋಣ, ಶಿರಹಟ್ಟಿ, ಮುಂಡರಗಿ, ಗದಗ, ನರಗುಂದ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾ ರಕಿಯರು ಹಾಜರಿದ್ದರು. ವಿ.ಜಿ. ಕೆಂಚನಗೌಡ್ರ ಪ್ರಾರ್ಥಿಸಿದರು. ಬಿ.ಎಸ್.ಮೊಕಾಶಿ ಸ್ವಾಗತಿಸಿದರು. ಭಾರತಿ ಕಾಲಚೆಟ್ಟಿ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.