ADVERTISEMENT

ಅಂಗವಿಕಲರಿಗೆ ಆತ್ಮಸ್ಥೈರ್ಯ ತುಂಬಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:15 IST
Last Updated 11 ಫೆಬ್ರುವರಿ 2012, 5:15 IST

ಮುಂಡರಗಿ: `ಮಕ್ಕಳ ಅಂಗವೈಕಲ್ಯ ಶಾಪವೆಂದು ಭಾವಿಸದೆ ಪಾಲಕರು, ನೆರೆಹೊರೆಯವರು, ಶಿಕ್ಷಕರು ಅಂತಹ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಸಮಾಜದ ಮುಖ್ಯ ವಾಹಿನಿಗೆ ಕರೆತರಲು ಪ್ರಯತ್ನಿಸಬೇಕು~ ಎಂದು ಗದಗ ರೆಡ್ ಕ್ರಾಸ್ ಸಂಸ್ಥೆಯ ವಿ.ಎಂ.ಕುಲಕರ್ಣಿ ಹೇಳಿದರು.

 ತಾಲ್ಲೂಕಿನ ಶೀರನಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಿಂಗಟಾಲೂರ ಕ್ಲಷ್ಟರ್ ಮಟ್ಟದ ವಿಕಲ ಚೇತನ ಮಕ್ಕಳ ಸಮುದಾಯ ಜಾಗೃತಿ ಶಿಬಿರದಲ್ಲಿ ಅವರು ಮಾತನಾಡಿದರು.

`ಅಂಗವಿಕಲರಿಗಾಗಿ  ಹಲವು ಸಾಧನ ಸಲಕರಣೆಗಳು ಲಭ್ಯವಿದ್ದು, ಪಾಲಕರು ಅವುಗಳ ನೆರವಿನಿಂದ ಮಕ್ಕಳಿಗೆ ಅಂಗವೈಕಲ್ಯದ ಬಾಧೆ ತಟ್ಟದಂತೆ ನೋಡಿ ಕೊಳ್ಳ ಬಹುದಾಗಿದೆ. ಸರಕಾರಿ, ಅರೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಅಂಗವಿಕಲ ಮಕ್ಕಳಿಗೆ ಹಲವಾರು ಉದ್ಯೋಗಗಳನ್ನು ಮೀಸಲಿರಿಸಿದ್ದು, ಅಂಗವಿಕಲರು ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆದುಕೊಳ್ಳಬೇಕು~ ಎಂದು ಸಲಹೆ ನೀಡಿದರು.

 `ಅಂಗವಿಕಲ ಮಕ್ಕಳಿಗೆ ಯಾರೂ ಯಾವ ಕಾರಣಕ್ಕೂ ಅನುಕಂಪ ತೋರಿಸುವ ಅಗತ್ಯವಿಲ್ಲ. ಅವರಿಗೆ ಸೂಕ್ತ ಮಾರ್ಗದರ್ಶನ ದೊರೆತರೆ ಎಲ್ಲರಂತೆ ಅವರೂ ಬಾಳಬಲ್ಲರು. ಆ ನಿಟ್ಟಿನಲ್ಲಿ ಅಂಗವಿಕಲ ಮಕ್ಕಳು ತಮ್ಮ ಅಂಗವಿಕಲತೆಯನ್ನು ಮೀರಿ ತಮಗೆ ಇಷ್ಟವಾದ ರಂಗಗಳಲ್ಲಿ ಅದ್ಭುತ ಸಾಧನೆ ಮಾಡಬೇಕು. ಅಂಗವಿಕಲತೆ ಒಂದು ಸಮಸ್ಯೆ ಅಲ್ಲ ಎನ್ನುವುದನ್ನು ಇತರರಿಗೆ ತೋರಿಸಬೇಕು~ ಎಂದು ಪಿ.ಟಿ.ಬೈಲಪ್ಪನವರ ಹೇಳಿದರು.

`ಅಂಗವೈಕಲ್ಯವನ್ನು ಸಮಸ್ಯೆ ಎಂದು ಪರಿಗಣಿಸದೆ ಅದನ್ನು ಒಂದು ಸವಾಲೆಂದು ಭಾವಿಸಿ ಸಮಾಜದಲ್ಲಿ ಬದುಕಿ ತೋರಿಸಬೇಕು. ಅಂಗವಿಕಲ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕಲು ಪಾಲಕರು ಮತ್ತು ಶಿಕ್ಷಕರು ಸೂಕ್ತ ವೇದಿಕೆಗಳನ್ನು ಒದಗಿಸಬೇಕು~ ಎಂದು ಬಿ.ಸಿ.ರವೀಂದ್ರ ಹೇಳಿದರು. ರವಿ ದೇವರಡ್ಡಿ, ಶಶಿಕಲಾ ವಡ್ಡಟ್ಟಿ, ಹಮ್ಮಿಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಸಹಾಯಕ ಎಸ್.ಐ.ಪರಪ್ಪನವರ ಮಾತನಾಡಿದರು.

 ಶಿಂಗಟಾಲೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಮಾ ಶಿರಹಟ್ಟಿ ಶಿಬಿರವನ್ನು ಉದ್ಘಾಟಿಸಿದರು. ಗ್ರಾ.ಪಂ.ಸದಸ್ಯ ಹನುಮಪ್ಪ ಕಾತರಕಿ, ಪಾರವ್ವ ಚೌಟ್ನವರ, ಎಲ್.ಆರ್.ಮಡ್ಡಿ ಮತ್ತಿತರರು ವೇದಿಕೆಯ ಮೇಲೆ ಹಾಜರಿದ್ದರು. ಎಸ್.ಪಿ.ಹಿರೇಮಠ ಸರ್ವರನ್ನು ಸ್ವಾಗತಿಸಿದರು. ಜಗದೀಶ ಶೀರಿ ಕಾರ್ಯಕ್ರಮ ನಿರೂಪಿಸಿದರು. ಬಿ.ವಿ.ನಂದಗಾವಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.