ADVERTISEMENT

`ಅಂಗವಿಕಲರ ಅಭಿವೃದ್ಧಿಗೆ ರೂ 307 ಕೋಟಿ ಬಿಡುಗಡೆ'

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 6:35 IST
Last Updated 1 ಆಗಸ್ಟ್ 2013, 6:35 IST

ರೋಣ:  ರಾಜೀವ್ ಗಾಂಧಿ ಫೌಂಡೇಶನ್ ಅಂಗವಿಲಕರ ಶ್ರೇಯೋಭಿವೃದ್ಧಿಗಾಗಿ ಸ್ಥಾಪಿಸಿದ ಸಂಸ್ಥೆಯಾಗಿದ್ದು, ಇದಕ್ಕೆ ಯುನಿಸೆಫ್‌ದಿಂದ ನೇರವಾಗಿ ಅನುದಾನ ಬರಲಿದೆ. ಈ ಫೌಂಡೇಶನ್‌ನಿಂದ ಈಗಾಗಲೇ ರಾಜ್ಯಕ್ಕೆ 307 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ಅಂಗವಿಕಲರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಸಂಸದ ಆರ್.ಎಸ್. ಪಾಟೀಲ ಹೇಳಿದರು.

ಸೋಮವಾರ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ರೋಣ ತಾಲ್ಲೂಕು ವಿಕಲಚೇತನ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಜಿ.ಎಸ್.ಪಾಟೀಲ್ ಅವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಈ ಹಣದಲ್ಲಿ 115 ಕೋಟಿ ರೂಪಾಯಿ ಉತ್ತರ ಕರ್ನಾಟಕದಲ್ಲಿನ ಅಂಗವಿಕಲರ ಅಭಿವೃದ್ಧಿಗೆ ಮೀಸಲು ಇರಿಸಲಾಗಿದೆ. ಸಂಪೂರ್ಣ ಅಂಗವಿಕಲರಿಗೆ ತಾಲ್ಲೂಕು ಮಟ್ಟದಲ್ಲಿ 100 ಮನೆ, ಪ್ರತಿ  ಗ್ರಾ.ಪಂ ನಲ್ಲಿ 25 ಮನೆಗಳನ್ನು ಅಂಗವಿಕಲರಿಗೆ ಕಾಯ್ದಿರಿಸಬೇಕು ಎಂದು ನ್ಯಾಶನಲ್ ಹ್ಯಾಂಡಿಕ್ಯಾಪ್ಡ್ ಫೌಂಡೇಶನ್ ಕಾರ್ಪೋರೇಶನ್ (ಎನ್.ಎಚ್.ಪಿ.ಸಿ) ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಸದ್ಯದಲ್ಲಿಯೇ ಮಂಜೂರಾತಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸನ್ಮಾನ ಸ್ವೀಕರಿಸಿದ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಪಡಿತರ ವ್ಯವಸ್ಥೆಯಲ್ಲಿ ಅಂಗವಿಕಲರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ತಹಶೀಲ್ದಾರರಿಗೆ ಸೂಚಿಸಲಾಗುವುದು ಎಂದರು.

ಸಾನಿಧ್ಯ ವಹಿಸಿದ ಗುಲಗಂಜಿ ಮಠದ ಗುರಪಾದ ಶ್ರೀಗಳು, ರಾಜೀವಗಾಂಧಿ ಫೌಂಡೇಶನ್ ಸದಸ್ಯ ವೀರೇಶ ತೋಟರ ಮಾತನಾಡಿದರು. ಬಸವರಾಜ ಚೊಳಚಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ತಾಲ್ಲೂಕು ಅಧ್ಯಕ್ಷ ನಾಗಪ್ಪ ಗಡಗಿ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಸದಸ್ಯ ಶಫೀಕ್ ಮೂಗನೂರ, ದಶರಥ ಗಾಣಿಗೇರ, ಯೂಸೂಫ್ ಇಟಗಿ, ವಿಶ್ವನಾಥ ಜಿಡ್ಡಿಬಾಗಿಲ, ಬಸವರಾಜ ಸುಂಕದ, ವಿ.ಆರ್.ಗುಡಿಸಾಗರ, ಹುಚ್ಚಪ್ಪ ನವಲಗುಂದ, ಶಿವಾನಂದ ಗಡಗಿ, ಮಲ್ಲಣ್ಣ ಗಡಗಿ, ಗಿರೀಶ ಉಪಸ್ಥಿತರಿದ್ದರು. ಅರಗಿದ್ದ ಸ್ವಾಗತಿಸಿದರು. ವಿ.ಬಿ.ಸೋಮನಕಟ್ಟಿಮಠ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.