ADVERTISEMENT

ಜಿಲ್ಲೆಯಾದ್ಯಂತ ಮಳೆ, ಬಿರುಗಾಳಿ ಅಬ್ಬರ

ಲಕ್ಷ್ಮೇಶ್ವರ, ಮುಳಗುಂದ ಹೋಬಳಿಯಲ್ಲಿ ಅಪಾರ ಹಾನಿ; ಜನಜೀವನ ಅಸ್ತವ್ಯಸ್ಥ

​ಪ್ರಜಾವಾಣಿ ವಾರ್ತೆ
Published 25 ಮೇ 2018, 8:36 IST
Last Updated 25 ಮೇ 2018, 8:36 IST

ಗದಗ: ಜಿಲ್ಲೆಯ ಅಲ್ಲಲ್ಲಿ ಗುರುವಾರ ರಾತ್ರಿ ಮತ್ತೆ ಬಿರುಗಾಳಿ ಸಹಿತ ಮಳೆ ಆರ್ಭಟಿಸಿತು. ಮುಳಗುಂದ ಪಟ್ಟಣ ಸೇರಿದಂತೆ ಶೀತಾಲಹರಿ ಹಾಗೂ ಬಸಾಪುರ ಗ್ರಾಮದ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಗಾಳಿಯ ರಭಸಕ್ಕೆ ಮುಂಡರಗಿ, ಲಕ್ಷ್ಮೇಶ್ವರ, ಮುಳಗುಂದ ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಹೊದೆಸಿದ್ದ ತಗಡು ಹಾರಿಹೋಗಿವೆ.


ಮುಳಗುಂದದಲ್ಲಿ ಸಿದ್ದೇಶ್ವರ ನಗರದಲ್ಲಿ ಮನೆ ಮುಂದಿನ ಗಿಡವೊಂದು ವಿದ್ಯುತ್ ತಂತಿ ಮೇಲೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿತು. ರಸ್ತೆ ಸಂಚಾರಕ್ಕೂ ತೀವ್ರ ಅಡಚಣೆಯಾಯಿತು. ಶೀತಾಲಹರಿ ಗ್ರಾಮದಲ್ಲಿವಿದ್ಯುತ್‌ ಕಂಬಗಳು ಧರೆಗುರುಳಿವೆ. ಲಕ್ಷ್ಮೇಶ್ವರ ತಾಲ್ಲೂಕು ಮತ್ತು ಮುಳಗುಂದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಕಳೆದೊಂದು ವಾರದಿಂದ ಸತತವಾಗಿ ಜಿಲ್ಲೆಯಲ್ಲಿ ರಾತ್ರಿ ವೇಳೆ ಮಳೆಯಾಗುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಹಲವು ಕಡೆ ಮರಗಳು ರಸ್ತೆಗೆ ಉರುಳಿವೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದಿರುವುದರಿಂದ ಹೆಸ್ಕಾಂಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ.

ADVERTISEMENT

ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಿಂದ ಉಂಟಾಗುವ ಹಾನಿ, ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮನೋಜ್‌ ಜೈನ್, ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ಸೂಚಿಸಿದ್ದಾರೆ.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮಳೆ ಹಾನಿ, ಜೀವಹಾನಿ ಕುರಿತು ವರದಿ ನೀಡಬೇಕು. ತಕ್ಷಣ ತುರ್ತು ಕ್ರಮ ಕೈಗೊಳ್ಳಬೇಕು.ತಹಶೀಲ್ದಾರರು ಪ್ರತಿ ತಾಲ್ಲೂಕುಗಳಲ್ಲಿ ನಿಯಂತ್ರಣ ಕೊಠಡಿ ತೆರೆದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನೆರೆ ಹಾವಳಿಯ ಮೇಲೆ ನಿಗಾ ಇಟ್ಟು, ಇಂತಹ ಪ್ರದೇಶದಲ್ಲಿ ಸಿಬ್ಬಂದಿ ನಿಯೋಜಿಸಿ, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಬೇಕು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ತುರ್ತು ಚಿಕಿತ್ಸೆಗೆ ಸಿದ್ಧರಿರಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆ

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯಿಂದ ಉಂಟಾಗುವ ಹಾನಿ, ಪ್ರವಾಹ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮನೋಜ್‌ ಜೈನ್, ಉಪವಿಭಾಗಾಧಿಕಾರಿ, ತಹಶೀಲ್ದಾರರಿಗೆ ಸೂಚಿಸಿದ್ದಾರೆ.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಮಳೆ ಹಾನಿ, ಜೀವಹಾನಿ ಕುರಿತು ವರದಿ ನೀಡಬೇಕು. ತಕ್ಷಣ ತುರ್ತು ಕ್ರಮ ಕೈಗೊಳ್ಳಬೇಕು.ತಹಶೀಲ್ದಾರರು ಪ್ರತಿ ತಾಲ್ಲೂಕುಗಳಲ್ಲಿ ನಿಯಂತ್ರಣ ಕೊಠಡಿ ತೆರೆದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ನೆರೆ ಹಾವಳಿಯ ಮೇಲೆ ನಿಗಾ ಇಟ್ಟು, ಇಂತಹ ಪ್ರದೇಶದಲ್ಲಿ ಸಿಬ್ಬಂದಿ ನಿಯೋಜಿಸಿ, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಬೇಕು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ತುರ್ತು ಚಿಕಿತ್ಸೆಗೆ ಸಿದ್ಧರಿರಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಗರಮಡುವು: ಬಾಲಕ ಸಾವು

ಲಕ್ಷ್ಮೇಶ್ವರ: ಪಟ್ಟಣದಲ್ಲಿ ಗುರುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ನಾಗರಮಡುವು ಗ್ರಾಮದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಬೀರಪ್ಪ ಮಾರುತೆಪ್ಪ ಕುರಿ (12) ಎಂಬ ಬಾಲಕ ಮೃತಪಟ್ಟಿದ್ದಾನೆ. ಮೃತ ಬಾಲಕ ಲಕ್ಷ್ಮೇಶ್ವರ ಸಮೀಪದ ಬಾಲೆಹೊಸೂರು ಗ್ರಾಮದ ನಿವಾಸಿ.

ಸಂಜೆಯ ವೇಳೆಗೆ ಆರ್ಭಟಿಸಿದ ಬಿರುಗಾಳಿಗೆ ಸಿಲುಕಿ ಸಮೀಪದ ಬಸಾಪುರ ಗ್ರಾಮದ 35ಕ್ಕೂ ಹೆಚ್ಚು ಮನೆಗಳಿಗೆ ಹೊದೆಸಿದ್ದ ತಗಡು ಹಾರಿ ಹೋಗಿವೆ. ಗಾಳಿಯ ರಭಸಕ್ಕೆ ತೂರಿಬಂದ ತಗಡು ಅಪ್ಪಳಿಸಿ, ನಾಗಪ್ಪ ಬಳಿಗಾರ ಎಂಬು
ವವರ ಕಾಲಿಗೆ ಬಡಿದು ಅವರಿಗೆ ತೀವ್ರ ಗಾಯವಾಗಿದೆ. ತಾಲ್ಲೂಕಿನಾದ್ಯಂತ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನ–ಜೀವನ ಅಸ್ತವ್ಯಸ್ತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.