ADVERTISEMENT

`ವಂಚನೆ ತಡೆಗೆ ಹಕ್ಕಿನ ಅರಿವು ಅಗತ್ಯ'

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 6:35 IST
Last Updated 25 ಡಿಸೆಂಬರ್ 2012, 6:35 IST
ಗದುಗಿನಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರೇಗೌಡ ಮಾತನಾಡಿದರು. ಶಶಿಧರ ಕುಬೇರ, ಎಫ್.ಐ. ಲಕ್ಷ್ಮೇಶ್ವರ ಮಠ, ಶ್ಯಾಮಲಾ ಮಾಣೀಕ್ಯಾಲರಾವ್ ಇದ್ದಾರೆ.
ಗದುಗಿನಲ್ಲಿ ಸೋಮವಾರ ಏರ್ಪಡಿಸಿದ್ದ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರೇಗೌಡ ಮಾತನಾಡಿದರು. ಶಶಿಧರ ಕುಬೇರ, ಎಫ್.ಐ. ಲಕ್ಷ್ಮೇಶ್ವರ ಮಠ, ಶ್ಯಾಮಲಾ ಮಾಣೀಕ್ಯಾಲರಾವ್ ಇದ್ದಾರೆ.   

ಗದಗ: ಪ್ರತಿಯೊಬ್ಬ ಗ್ರಾಹಕನು ತಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಹೊಂದಿದಾಗ ವಂಚನೆಯಿಂದ ಹೊರಬರಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ.ರುದ್ರೇಗೌಡ ಅಭಿಪ್ರಾಯಪಟ್ಟರು.

ನಗರದ ಚೇಂಬರ್ ಆಫ್ ಕಾಮರ್ಸ್  ಸಭಾ ಭವನದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ,  ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನಾ ಶಾಸ್ತ್ರ ಮತ್ತು ವಾರ್ತಾ ಇಲಾಖೆ  ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ  ಪ್ರತಿಯೊಬ್ಬ ಗ್ರಾಹಕರ ರಕ್ಷಣೆಯನ್ನು ಹಿತದೃಷ್ಟಿಯಲ್ಲಿಟ್ಟು ಕೊಂಡು 1984 ರಲ್ಲಿ ಈ ಕಾಯಿದೆ ಜಾರಿಗೆ ತಂದಿದೆ.  ಪ್ರತಿಯೊಬ್ಬ ಗ್ರಾಹಕನು ವಸ್ತು ಮತ್ತು ಸೇವೆಗಳನ್ನು ನೋಂದಾಯಿತ ವ್ಯಕ್ತಿ ಅಥವಾ ಸಂಸ್ಥೆಯಿಂದ ಪಡೆಯಬೇಕು. ಅನ್ಯಾಯ ಕಂಡು ಬಂದಲ್ಲಿ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಲಹೆ ನೀಡಿದರು.

ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ  ರಾಜ ಶೇಖರ ಶಿರೂರ ಭಿತ್ತಿಪತ್ರಗಳನ್ನು ಅನಾವರಣ ಗೊಳಿಸಿ, ಗ್ರಾಹಕರು ಮಾರುಕಟ್ಟೆಯಲ್ಲಿ ವಸ್ತು ಗಳನ್ನು ಖರೀದಿಸುವಾಗ ಕೂಲಂಕಶವಾಗಿ ಪರಿಶೀಲಿಸಿ ಖರೀದಿಸಬೇಕು ಎಂದರು.

ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯ ಎಫ್.ಐ. ಲಕ್ಷ್ಮೇಶ್ವರ ಮಠ ಮಾತನಾಡಿ,  ವೇದಿಕೆಗೆ ಗ್ರಾಹಕರು ದೂರು ಸಲ್ಲಿಸಿ 3 ರಿಂದ 6 ತಿಂಗಳೊಳಗಾಗಿ ಪರಿಹಾರ ಕಂಡುಕೊಳ್ಳಬಹುದು.  ದೂರು ಸಲ್ಲಿಸುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳು ನ್ಯಾಯಯುತವಾಗಿರಬೇಕು  ಮತ್ತು ರೂ. 100 ಡಿ.ಡಿ. ತೆಗೆದು ದೂರು ಸಲ್ಲಿಸಬೇಕು ಎಂದರು.       
  
ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಹಕರ ವೇದಿಕೆಯ ಸದಸ್ಯೆ ಶ್ಯಾಮಲಾ ಮಾಣೀಕ್ಯಾ ಲರಾವ್, ನ್ಯಾಯಾಲಯಗಳಲ್ಲಿ ಯಾವುದೇ ಪ್ರಕರಣ ದಾಖಲಿಸಿದ್ದಲ್ಲಿ ಇತ್ಯಥಗೊಳ್ಳಲು ಕಾಲಾ ವಕಾಶ ಬೇಕಾಗುತ್ತದೆ. ಆದರೆ ಗ್ರಾಹಕರ ವೇದಿಕೆಯಲ್ಲಿ ತ್ವರಿತ ನ್ಯಾಯ ಪಡೆಯಬಹುದು ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ  ಉಪನಿರ್ದೇಶಕ  ಶಶಿಧರ ಕುಬೇರ ಸ್ವಾಗತಿಸಿದರು.  ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಬಿ. ಬೆಳ್ಳಟ್ಟಿ ನಿರೂಪಿಸಿದರು.  ಕಾನೂನು ಇಲಾಖೆಯ    ಎನ್.ಬಿ. ಮಾರನಬಸರಿ ಹಾಗೂ ವಾರ್ತಾ ಇಲಾಖೆಯ  ಎಸ್. ಎಸ್. ಕಟ್ಟಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.