ನರಗುಂದ: ಪಟ್ಟಣದ ರಾಜಮಾರ್ಗ ಎಂದೇ ಕರೆಯಲಾಗುವ ಸರ್ವಜ್ಞ ವೃತ್ತದಿಂದ ಪುರಸಭೆಯವರೆಗಿನ ರಸ್ತೆ ಯಲ್ಲಿ ಗುಂಡಿಗಳು ಬಿದ್ದು ಮಳೆಯಾದರೆ ಕೆಸರುಗದ್ದೆಯಾಗಿ ಮಾರ್ಪಡುತ್ತದೆ.
ಮಳೆ ಸುರಿದ ನಂತರ ಒಂದು ವಾರದವರೆಗೆ ಇದೇ ಪರಿಸ್ಥಿತಿ ಇರುತ್ತದೆ. ಬಸವೇಶ್ವರ ಸಮುದಾಯ ಭವನದ ಎದುರಿಗೆ ಆಳವಾದ ಗುಂಡಿ ಉಂಟಾಗಿದ್ದು,ಇಲ್ಲಿ ವಾಹನ ಸವಾರರು ಪರದಾಡಬೇಕಿದೆ.
ಶಾಲಾ ಕಾಲೇಜು, ಮುಖ್ಯ ಮಾರುಕಟ್ಟೆ, ಪುರಸಭೆ ಸೇರಿದಂತೆ ಎಲ್ಲ ಪ್ರಮುಖ ಸ್ಥಳಿಗೆ ಹೋಗಲು ಈ ರಸ್ತೆಯನ್ನೇ ಜನರು ಅವಲಂಬಿಸಿದ್ದಾರೆ. ಡಾಂಬರು ಕಿತ್ತು ಹೋಗಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಪಾದಚಾರಿಗಳು ನಿತ್ಯ ಪುರಸಭೆಯನ್ನು ಶಪಿಸುತ್ತಾ ಇಲ್ಲಿ ನಡೆದಾಡಬೇಕಿದೆ. ಗಾಂಧಿ ವೃತ್ತದಿಂದ ಪುರಸಭೆ ಮಾರ್ಗದಲ್ಲಿ ಸಂಚಿರುವ ಜನರ ಗೋಳು ಹೇಳತೀರದು.
ಬಸವೇಶ್ವರ ಸಮುದಾಯ ಭವನದ ಎದುರಿಗೆ ಇರುವ ರಸ್ತೆ ಮೂಲಕವೇ ಹಳೇ ಎಪಿಎಂಸಿ ಆವರಣಕ್ಕೆ ತೆರಳಬೇಕು. ಈ ಆವರಣದಲ್ಲಿ ವಿವೇಕಾನಂದ ವಿದ್ಯಾಲಯ, ಜ್ಞಾನ ಮುದ್ರಾ, ಚೋಟಾ ಚಾಂಪ್ಸ್ ಪೂರ್ವ ಪ್ರಾಥಮಿಕ ಶಾಲೆಗಳಿದ್ದು, ಚಿಣ್ಣರು ಈ ಕೆಸರಿನ ಗುಂಡಿಯಲ್ಲಿ ಜಿಗಿಯುತ್ತಾ ಶಾಲೆಗೆ ತೆರಳಬೇಕು.
ವಾಹನ ಹಾದು ಹೋದರೆ ಪಾದಚಾರಿಗಳ ಮೈ ತುಂಬಾ ಕೆಸರಿನ ಅಭಿಷೇಕ ಆಗುತ್ತದೆ. ಕುಡಿಯುವ ಪೈಪ್ಲೈನ್ ಅಳವಡಿಕೆಗಾಗಿ ಎಲ್ಲಿ ಬೇಕೆಂದರಲ್ಲಿ ರಸ್ತೆ ಅಗೆದು ಬಿಡಲಾಗಿದೆ.
‘ಕಳೆದ ಐದು ವರ್ಷಗಳಿಂದ ನೋಡುತ್ತಿದ್ದೇವೆ. ಈ ರಸ್ತೆ ಮಾತ್ರ ಸರಿಯಾಗಿಲ್ಲ. ಪುರಸಭೆ ನಿರ್ಲಕ್ಷ್ಯದಿಂದ ರಸ್ತೆ ಇಷ್ಟೊಂದು ಹದಗೆಟ್ಟಿದೆ’ ಎಂದು ಪಟ್ಟಣದ ನಿವಾಸಿ ಚನ್ನು ನಂದಿ ಹೇಳಿದರು.
ರಸ್ತೆ ಸಂಪೂರ್ಣ ಹಾಳಾಗಿರುವುದರಿಂದ ನಗರೋತ್ಥಾನ ಯೋಜನೆಯಡಿ ಶೀಘ್ರವೇ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು
– ಎನ್.ಎಸ್.ಪೆಂಡಸೆ, ಪುರಸಭೆ ಅಧಿಕಾರಿ
ಬಸವರಾಜ ಹಲಕುರ್ಕಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.