ಗಜೇಂದ್ರಗಡ: ‘ನಗರದಲ್ಲಿ ಶಿವಮೊಗ್ಗದ ಹೆಗ್ಗೋಡು ಚರಕ ಮತ್ತು ದೇಶಿ ಸಂಸ್ಥೆಯ ಮಾದರಿಯ ಕೇಂದ್ರ ಸ್ಥಾಪಿಸಲಾಗುವುದು. ಈ ಕೇಂದ್ರ ಸ್ಥಾಪನೆಯಿಂದಾಗಿ ಸಾವಿರಕ್ಕೂ ಅಧಿಕ ನೇಕಾರರಿಗೆ ಉದ್ಯೋಗ ದೊರೆಯಲಿದೆ’ ಎಂದು ಚರಕ ಮತ್ತು ದೇಶಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಹಾಗೂ ಅಖಿಲ ಭಾರತ ನೇಕಾರರ ಒಕ್ಕೂಟದ ಸಂಚಾಲಕ ಎಸ್.ಸಿ.ದೇವರಮನೆ ಹೇಳಿದರು.
ಇಲ್ಲಿನ ಆದಿಶಕ್ತಿ ಕೈಮಗ್ಗ ನೇಕಾರರ ಸಹಕಾರಿ ಸಂಘಕ್ಕೆ ಮಂಗಳವಾರ ಭೇಟಿ ನೀಡಿ ಬಟ್ಟೆ ತಯಾರಿಕೆ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದ ಅವರು,‘ಗದಗ, ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಆಧುನಿಕತೆ ಅಬ್ಬರದ ಮಧ್ಯೆಯೂ ಕುಲ ಕಸುಬು ‘ಕೈಮಗ್ಗ ನೇಕಾರಿಕೆ’ ವೃತ್ತಿಯನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಕುಟುಂಬಗಳು ಸಾಕಷ್ಟಿವೆ. ಹೀಗಾಗಿ ಈ ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ಹೆಗ್ಗೋಡು ಸಂಸ್ಥೆ ಮಾದರಿಯಲ್ಲಿಯೇ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ’ ಎಂದರು.
‘ಗಜೇಂದ್ರಗಡ ಸುತ್ತ–ಮುತ್ತಲು ನ್ಯಾಯಯುತ ಬೆಲೆಗೆ 15 ರಿಂದ 20 ಎಕರೆ ಜಮೀನು ಖರೀದಿಸುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಗಳಿಗೆ ವಸತಿ ವ್ಯವಸ್ಥೆ, ನೇಕಾರಿಕೆಗೆ ಪೂರಕವಾದ ನೂಲು, ಕಚ್ಚಾವಸ್ತು ತಯಾರಿಕೆ ಹಾಗೂ ಬಣಕಾರರಿಗೆ ಅಗತ್ಯ ಉದ್ಯೋಗ ಕಲ್ಪಿಸುವ ಘಟಕಗಳನ್ನು ಆದಷ್ಟು ಶೀಘ್ರ ಸ್ಥಾಪಿಸಲಾಗುವುದು’ ಎಂದರು.
‘ಸರ್ಕಾರಿ ಮಟ್ಟದಲ್ಲಿ ಕುಲ ಕಸುಬು ಕೈಮಗ್ಗ ನೇಕಾರಿಕೆ ಉಳಿವಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ₨ 500 ಕೋಟಿ ನೀಡುವುದಾಗಿ ಭರವಸೆ ನೀಡಿದೆ.
ಸದ್ಯ ₨ 120 ಕೋಟಿ ಅನುದಾನ ನೀಡಿದೆ. ಈ ಅನುದಾನವನ್ನು ಬಳಸಿಕೊಂಡೇ ಗಜೇಂದ್ರಗಡದಲ್ಲಿ ಹೆಗ್ಗೋಡು ಮಾದರಿಯ ಚರಕ ಮತ್ತು ದೇಶಿ ಸಂಸ್ಥೆ ಸ್ಥಾಪಿಸಲು ಮುಂದಾಗಿದೆ’ ಎಂದರು.
‘ರಾಜ್ಯದ ಕೈಮಗ್ಗೆ ನೇಕಾರಿಕೆಗೆ ವಿಶ್ವ ಮಾನ್ಯತೆ ಇದೆ. ಆದರೆ ವಿದ್ಯುತ್ ಮಗ್ಗ ಹಾಗೂ ಆಧುನಿಕತೆಯ ರಾಸಾಯನಿಕ ಬಣ್ಣಗಳ ಭರಾಟೆಗೆ ಸಿಲುಕಿ ನೈಸರ್ಗಿಕ ಬಟ್ಟೆ ತಯಾರಿಕೆಗೆ ರಾಸಾಯನಿಕ ಆಪತ್ತು ಬಂದೊದಗಿತ್ತು. ಇದರ ನಿವಾರಣೆಗಾಗಿ ಮೂಲ ಕೈಮಗ್ಗ ತಯಾರಿಕೆಯಲ್ಲಿ ನೈಸರ್ಗಿಕ ಬಟ್ಟೆಗಳ ತಯಾರಿಕೆಗೆ ಮುಂಬರುವ ದಿನಗಳಲ್ಲಿ ಗಜೇಂದ್ರಗಡ ನಗರದಿಂದಲೇ ಚಾಲನೆ ನೀಡಲಾಗುವುದು’ ಎಂದರು.
ನೈಸರ್ಗಿಕ ಬಣ್ಣ ಬಳಕೆ ಮಾಡಿ ಕೈಮಗ್ಗದಲ್ಲಿ ಬಟ್ಟೆ ಹಾಗೂ ಸೀರೆಗಳನ್ನು ಸಿದ್ಧಗೊಳಿಸುವ ನೇಕಾರರಿಗೆ ಮಾರುಕಟ್ಟೆ ಹಾಗೂ ಸ್ಥಿರ ದರ ಒದಗಿಸಿ ಕೊಡಲಾಗುವುದು. ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸುವ ಬಟ್ಟೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಈಗಾಗಲೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ಮಮತಾ ಬ್ಯಾನರ್ಜಿ ಯವರುಗಳು ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸಲಾದ ಸೀರೆಗಳನ್ನು ಧರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯಯುತ ನೈಸರ್ಗಿಕ ಬಣ್ಣ ಬಳಕೆ ಮಾಡಿ ತಯಾರಿಸುವ ಬಟ್ಟೆ ಮಾರಾಟಗಾರರಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಜವಾಬ್ದಾರಿ ಚರಕ ಮತ್ತು ದೇಶಿ ಸಂಸ್ಥೆಯ ಜವಾಬ್ದಾರಿ ಎಂದರು.
ಆದಿಶಕ್ತಿ ಕೈಮಗ್ಗ ನೇಕಾರ ಸಂಘದ ಕಾರ್ಯದರ್ಶಿ ವಿಶ್ವನಾಥ ಕೆಂಚಿ, ಪ್ರಗತಿ ಪರ ಚಿಂತಕ ಬಿ.ಎ.ಕೆಂಚರೆಡ್ಡಿ, ನೇಕಾರ ಮುಖಂಡ ಪಾಡುರಂಗ ಶಿಲವೇರಿ, ಹನಮಂತ ಕೆಂಚಿ. ಎಂ.ಎಂ.ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.