ಮುಳಗುಂದ: ಪಟ್ಟಣ ವ್ಯಾಪ್ತಿಯಲ್ಲಿ ಅಕಾಲಿಕ ಮಳೆಗೆ ಮೆಣಸಿನಕಾಯಿ ಫಸಲು ನಾಶವಾಗಿದ್ದು, ಕೃಷಿ, ತೋಟಗಾರಿಕೆ ಅಧಿಕಾರಿಗಳು ಹಾಗೂ ಸಂಶೋಧಕರ ತಂಡ ಶುಕ್ರವಾರ ರೈತ ಮಹೇಶ ಮಟ್ಟಿ ಅವರ ಹೊಲಕ್ಕೆ ಭೇಟಿ ನೀಡಿ ವೀಕ್ಷಿಸಿತು.
ನಂತರ ಗದಗ ಸಹಾಯಕ ಕೃಷಿ ನಿರ್ದೇಶಕ ರವಿ ಪಿ.ಆರ್ ಮಾತನಾಡಿ, ಹವಾಮಾನ ವೈಪರೀತ್ಯದಿಂದ ಮೆಣಸಿನಕಾಯಿಗೆ ಚಿಬ್ಬು ರೋಗ ತಗುಲಿ ಹಸಿರುಕಾಯಿ ಸಂಪೂರ್ಣ ಒಣಗಿ ನಾಶವಾಗಿವೆ. ಸರ್ಕಾರಕ್ಕೆ ಈಗಾಗಲೇ ಬೆಳೆ ಹಾನಿ ಸಮೀಕ್ಷೆ ವರದಿ ಸಲ್ಲಿಸಲಾಗಿದ್ದು ಪರಿಹಾರವಾಗಿ 1 ಹೆಕ್ಟೇರ್ಗೆ ₹ 6800 ನೇರವಾಗಿ ರೈತರ ಖಾತೆಗೆ ಜಮೆಯಾಗುತ್ತದೆ. ರೈತರು ಬೆಳೆ ವಿಮೆ ಮಾಡಿಸಿದ್ದರೆ, ಬೆಳೆ ವಿಮೆಗೆ ಅರ್ಜಿ ಸಲ್ಲಿಸಿದರೆ ಮಧ್ಯಂತರ ಅವಧಿಯಲ್ಲಿ ಪರಿಹಾರ ಬರುತ್ತದೆ. ಮಧ್ಯಂತರ ಅರ್ಜಿ ಸಲ್ಲಿಸದೆ ಇದ್ದರೆ ಕೊನೆಯಲ್ಲಿ ಪರಿಹಾರ ಬರುತ್ತದೆ ಎಂದು ತಿಳಿಸಿದರು.
ಕೃಷಿ ಸಂಶೋಧಕ ಸಿ.ಎಂ ರಫೀ ಮಾತನಾಡಿ, ಪ್ರತಿ ವರ್ಷ ಬೂದು ರೋಗ ಬರುತಿತ್ತು. ಆದರೆ ಪ್ರಸಕ್ತ ವರ್ಷದಲ್ಲಿ ಚಿಬ್ಬು ರೋಗ ಕಾಣಿಸಿಕೊಂಡಿದ್ದು, ಇದು ಶಿಲೀಂಧ್ರ ರೋಗ. ಈ ರೋಗವು ಮೊದಲು ಎಲೆಗಳ ಮೇಲೆ ಚುಕ್ಕಿ ಕುಳಿತು ನಂತರ ತುಂತುರು ಮಳೆಗೆ ಹಣ್ಣಿನಿಂದ ಹಣ್ಣಿಗೆ ಹರಡುತ್ತದೆ. ಮೆಣಸಿನಕಾಯಿ ಬೆಳೆಯೂ ಸಂಪೂರ್ಣ ನಾಶವಾಗಿದ್ದು ಮುಂದಿನ ಬೆಳೆಗೆ ಹರಡದಂತೆ ತಡೆಗಟ್ಟಲು ರೋಟರ್ ಹೊಡಿಸುವುದು ಉತ್ತಮ ಎಂದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಶೈಲೇಂದ್ರ ಬಿರಾದರ, ಸಹಾಯಕ ಕೃಷಿ ಅಧಿಕಾರಿ ಎಂ.ಬಿ ಸುಂಕಾಪುರ, ರೈತರಾದ ಬುದ್ಧಪ್ಪ ಮಾಡಳ್ಳಿ, ಮಹೇಶ ಮಟ್ಟಿ, ಶಂಕ್ರಪ್ಪ ಮಾಡಳ್ಳಿ, ಮಾಹಾಂತಪ್ಪ ಭೋಳನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.