ADVERTISEMENT

ಗದಗ| ದುರಸ್ತಿಯಾಗದ ಅಂಗನವಾಡಿ ಕಟ್ಟದಲ್ಲಿ ಮಕ್ಕಳಿಗೆ ಪಾಠ..!

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 15:55 IST
Last Updated 24 ಜನವರಿ 2020, 15:55 IST
ಚಿಂಚಲಿ ಗ್ರಾಮದ ಯುವಕ ಮಂಡಳದ ಕಟ್ಟಡದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿರು ಅಂಗನವಾಡಿ ಕೇಂದ್ರ ಸಂಖ್ಯೆ 161 ರ ಮಕ್ಕಳು ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವದು. 
ಚಿಂಚಲಿ ಗ್ರಾಮದ ಯುವಕ ಮಂಡಳದ ಕಟ್ಟಡದಲ್ಲಿ ತಾತ್ಕಾಲಿಕ ಆಶ್ರಯ ಪಡೆದಿರು ಅಂಗನವಾಡಿ ಕೇಂದ್ರ ಸಂಖ್ಯೆ 161 ರ ಮಕ್ಕಳು ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವದು.    

ಮುಳಗುಂದ: ಸಮೀಪದ ಚಿಂಚಲಿ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 161ರ ಕಟ್ಟಡ ಶಿಥಿಲಗೊಂಡು ವರ್ಷ ಸಮೀಪಿಸಿದ್ದು, ಈ ಅಪಾಯಕಾರಿ ಕಟ್ಟಡದಲ್ಲೇ ಮಕ್ಕಳ ಆಟ–ಪಾಠಗಳು ನಡೆಯುತ್ತಿವೆ.

ವರ್ಷಗಳ ಹಿಂದೆ ತೇರಿನ ಗಡ್ಡಿ ಹತ್ತಿರ ನಿರ್ಮಿಸಿದ ಅಂಗನವಾಡಿ ಕಟ್ಟಡದ ಛಾವಣಿ ಶಿಥಿಲಗೊಂಡಿದೆ. ಶೌಚಾಲಯ ಮತ್ತು ನೀರಿನ ಸೌಲಭ್ಯ ಪಡೆಯಲು ವಿದ್ಯುತ್ ಸಂಪರ್ಕ ಇಲ್ಲದಾಗಿದೆ. ಈ ಕಟ್ಟಡದಲ್ಲಿ ಮಕ್ಕಳಿಗೆ ಪಾಠ ಮಾಡಲು ಅಂಗನವಾಡಿ ಕಾರ್ಯಕರ್ತೆಯರೇ ಆತಂಕ ಪಡುತ್ತಿದ್ದಾರೆ. ಕಟ್ಟಡ ದುರಸ್ತಿ ಹಿನ್ನೆಲೆಯಲ್ಲಿ 5 ತಿಂಗಳಿಂದ ತಾತ್ಕಾಲಿಕವಾಗಿ ಯುವಕ ಮಂಡಳದ ಕಟ್ಟಡದಲ್ಲಿ ಅಂಗನವಾಡಿಗೆ ಆಶ್ರಯ ಕಲ್ಪಿಸಲಾಗಿದೆ. ಆದರೆ, ಹಳೆಯ ಕಟ್ಟಡದ ದುರಸ್ತಿ ಕಾರ್ಯಇನ್ನೂ ಆರಂಭವಾಗಿಲ್ಲ.

ತಾತ್ಕಾಲಿಕ ಕಟ್ಟಡವೂ ಸುಸಜ್ಜಿತವಾಗಿಲ್ಲ. ಧೂಳಿನಿಂದ ಆವೃತವಾದ ಕೋಣೆಯಲ್ಲಿ ಮಕ್ಕಳು ಕುಳಿತುಕೊಳ್ಳುವ ಅನಿವಾರ್ಯತೆ ಇದೆ. ಕಟ್ಟಡದ ಒಂದು ಭಾಗದಲ್ಲಿ ಮಕ್ಕಳಿಗೆ ಬೇಕಾದ ಆಹಾರದ ದಾಸ್ತಾನು, ಅಲ್ಲೇ ಅಡುಗೆ ತಯಾರಿಸುವ ಗ್ಯಾಸ್ ಸಿಲಿಂಡರ್ ಇಡಲಾಗಿದೆ. ಮಾತೃಪೂರ್ಣ ಯೋಜನೆ ಅಡಿ ಗರ್ಭಿಣಿಯರು, ಬಾಣಂತಿಯರು ಸಹ ಈ ಕೋಣೆಯಲ್ಲೇ ಕುಳಿತು ಊಟ ಮಾಡಬೇಕಿದೆ.

ADVERTISEMENT

‘ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಲಗೆ ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆರು ಸಾಕಷ್ಟು ಮನವಿ ಮಾಡಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ನಿಂಗಪ್ಪ ತೇರಿನಗಡ್ಡಿ, ಮಲ್ಲು ಕಾಮರಡ್ಡಿ ಆರೋಪಿಸಿದರು. ಕೂಡಲೇ ಅಂಗನವಾಡಿ ಕಟ್ಟಡ ದುರಸ್ತಿ ಮಾಡಿ ಸೌಲಭ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.