ಗದಗ: ಬಿಜೆಪಿ ಕಾರ್ಯಕರ್ತನ ಬೈಕ್ ತಡೆದು ವಿಚಾರಿಸಿದ್ದಕ್ಕೆ, ಬೆಟಗೇರಿ ಪೊಲೀಸ್ ಠಾಣೆಯ ಎಎಸ್ಐ ಒಬ್ಬರು ಸಸ್ಪೆಂಡ್ ಆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 17ರಂದು ಬೆಟಗೇರಿಯ ಟೆಂಗಿನಕಾಯಿ ಬಜಾರ್ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಮೂಲಿಮನಿ ಅವರು ಗಜೇಂದ್ರಗಡದ ವ್ಯಕ್ತಿಯೊಬ್ಬನ ಬೈಕ್ ತಡೆದು, ಪ್ರಶ್ನಿಸಿದ್ದಾರೆ. ಆತ ನೇರವಾಗಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಕರೆ ಮಾಡಿ, ಮಾತನಾಡುವಂತೆ ಎಎಸ್ಐಗೆ ಕೊಟ್ಟಿದ್ದಾನೆ. ಈ ವೇಳೆ ಶಾಸಕರ ಜತೆಗೆ ಒರಟಾಗಿ ಮಾತನಾಡಿದ ಕಾರಣ ಅವರು ಮೇಲಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ ಎನ್ನಲಾಗಿದೆ.
‘ಎಎಸ್ಐ ಮೂಲಿಮನಿ ಅವರ ಮೇಲೆ ಸಾರ್ವಜನಿಕರಿಂದಲೂ ದೂರು ಬಂದಿದ್ದವು. ಹೂವು, ತರಕಾರಿ ಗಾಡಿಗಳನ್ನು ಹಿಡಿದು ರೈತರಿಗೆ ತೊಂದರೆ ನೀಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬೈಕ್ ಹಿಡಿದ ವಿಚಾರವಾಗಿ ಮೇ 17ರಂದು ಶಾಸಕರ ಜತೆಗೆ ಕೂಡ ಒರಟಾಗಿ ಮಾತನಾಡಿದ್ದಾರೆ. ಈ ಸಂಬಂಧ ಅವರ ಮೇಲೆ ಬೆಟಗೇರಿ ಠಾಣೆಯ ಪಿಎಸ್ಐ ರಿಪೋರ್ಟ್ ನೀಡಿದ್ದರು. ಆದ್ದರಿಂದ ಎಎಸ್ಐ ಮೂಲಿಮನಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ’ ಎಂದು ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.