ನರಗುಂದ: ‘ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಎಂಟು ವರ್ಷಗಳ ಹಿಂದೆ ಮಹದಾಯಿ–ಕಳಸಾಬಂಡೂರಿ ಹೋರಾಟಗಾರರ ಮೇಲೆ ದಾಖಲಾಗಿದ್ದ ಪ್ರಕರಣ ಬುಧವಾರ ಅಂತ್ಯಗೊಂಡಿದೆ. ರೈತರನ್ನು ನ್ಯಾಯಾಲಯ ಆರೋಪದಿಂದ ಖುಲಾಸೆಗೊಳಿಸಿದೆ’ ಎಂದು ಮಹದಾಯಿ ಹೋರಾಟಗಾರ ಶಂಕರ ಅಂಬಲಿ ಗುರುವಾರ ತಿಳಿಸಿದರು.
2017ರಲ್ಲಿ ಹೋರಾಟದ ಸಂದರ್ಭದಲ್ಲಿ ರೈತರು ನರಗುಂದದ ಎಪಿಎಂಸಿ ಆವರಣದಲ್ಲಿನ ಗೋದಾಮಿನಲ್ಲಿ ಸಭೆ ಸೇರಿದ್ದರು. ನವಲಗುಂದ ಪೊಲೀಸ್ ಠಾಣೆ ಗುಪ್ತಚರ ವಿಭಾಗದ ಸಿಬ್ಬಂದಿ ಬಾಪುಗೌಡ ಪಾಟೀಲ ಸಭೆಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ಆಗ ರೊಚ್ಚಿಗೆದ್ದ ರೈತರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 12 ಜನರ ಮೇಲೆ ಪ್ರಕರಣ ದಾಖಲಾಗಿತ್ತು. 2018ರಲ್ಲಿ ಎಲ್ಲ ರೈತರು ಜಾಮೀನು ಪಡೆದುಕೊಂಡಿದ್ದರು.
ವಿವಿಧ ಹೋರಾಟದಲ್ಲಿ ಭಾಗಿಯಾದ ರೈತರ ಮೇಲೆ ಇರುವ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಶಂಕರ ಅಂಬಲಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.