
ಸಿ.ಸಿ.ಪಾಟೀಲ
ಗದಗ: ‘ಅವಳಿ ನಗರದಲ್ಲಿ ಇದೇ ಮೊದಲಬಾರಿಗೆ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳ ನ.11ರಿಂದ 18ರವರೆಗೆ ನಡೆಯಲಿದೆ’ ಎಂದು ಅತಿರುದ್ರ ಮಹಾಯಜ್ಞ ಸೇವಾ ಸಮಿತಿಯ ಗೌರವಾಧ್ಯಕ್ಷ, ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.
‘ಅಮರನಾಥೇಶ್ವರ ಮಹಾದೇವ ಮಠದ ಮಹಾಂತ ಸಹದೇವಾನಂದ ಗಿರೀಜೀ ಮಹಾರಾಜರ ನೇತೃತ್ವದಲ್ಲಿ 9 ಅಗ್ನಿಕುಂಡದಲ್ಲಿ ಅತಿರುದ್ರ ಮಹಾಯಜ್ಞ ಹಾಗೂ ಕಿರಿಯ ಕುಂಭಮೇಳ ನಡೆಯಲಿದೆ. ಹಿಮಾಲಯದಲ್ಲಿ ತಪಸ್ಸು ಮಾಡಿದ ನಾಗಾಸಾಧುಗಳು, ಸನ್ಯಾಸಿಗಳು, ಅರ್ಚಕರು ಇದನ್ನು ನಡೆಸಿಕೊಡಲಿದ್ದಾರೆ. ಇದು ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶವಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನವೆಂಬರ್ 11ರಂದು ನಗರದ ತ್ರಿಕೂಟೇಶ್ವರ ದೇವಸ್ಥಾನದಿಂದ ವಿಡಿಎಸ್ಟಿ ಮೈದಾನದವರೆಗೆ ಐದು ಸಾವಿರ ಮಂದಿ ಮಹಿಳೆಯರಿಂದ ಕುಂಭಮೇಳ ನಡೆಯಲಿದೆ. ಅತಿರುದ್ರ ಮಹಾಯಜ್ಞದಲ್ಲಿ 150 ಮಂದಿ ದಂಪತಿಗೆ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ. ಬರುವ ಭಕ್ತರಿಗೆಲ್ಲಾ ಅಷ್ಟೂ ದಿನಗಳ ಕಾಲ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.
‘ನವೆಂಬರ್ 12ರಿಂದ ಯಜ್ಞಗಳು ಪ್ರಾರಂಭವಾಗಲಿದ್ದು, ಉಜ್ಜಯಿನಿಯಿಂದ 200 ಮಂದಿ ವೈದಿಕರು ಬರುವರು. 100 ಮಂದಿ ನಾಗಾಸಾಧುಗಳು ಬರುವರು. ಹಿಮಾಲಯದಲ್ಲಿ ಸಿಗುವ ಅತ್ಯಮೂಲ್ಯ ವನಸ್ಪತಿಗಳನ್ನು ತಂದು ಅಗ್ನಿಕುಂಡಕ್ಕೆ ಸಮರ್ಪಿಸುವರು. 900 ನದಿಗಳ ನೀರು ಯಜ್ಞಕ್ಕೆ ಬಳಕೆ ಆಗಲಿದೆ. ನ.18ರಂದು ಧರ್ಮಸಭೆ ನಡೆಯಲಿದೆ. ರಾಜ್ಯಪಾಲರು, ಮೈಸೂರು ಸಂಸದ ಯದುವೀರ್ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
ಅತಿರುದ್ರ ಮಹಾಯಜ್ಞ ಸೇವಾ ಸಮಿತಿಯ ಅಧ್ಯಕ್ಷ ಕಿರಣ ಭೂಮಾ ಮಾತನಾಡಿ, ‘ಯಜ್ಞದ ಸಲುವಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಾಗಾಸಾಧುಗಳು ಹಾಗೂ ಅರ್ಚಕ ವೃಂದಕ್ಕೆ ವಸತಿ ವ್ಯವಸ್ಥೆ ಮಾಡಲಾಗಿದೆ. ಈ ಮಹಾಯಜ್ಞದಲ್ಲಿ ಭಾಗವಹಿಸಿ, ಶಿವಲಿಂಗದ ರುದ್ರಾಭಿಷೇಕ ಮಾಡುವುದರಿಂದ ಮಹಾ ಮೃತ್ಯುಂಜಯ ಜಪದ ಫಲ ಪ್ರಾಪ್ತಿಯಾಗುವುದು’ ಎಂದು ತಿಳಿಸಿದರು.
ಪದಾಧಿಕಾರಿಗಳಾದ ಎಸ್.ಎಚ್.ಶಿವನಗೌಡರ, ರವಿ ದಂಡಿನ, ಬಸವರಾಜ ಬಿಂಗಿ, ವೆಂಕಟೇಶ ಕುಲಕರ್ಣಿ, ಸದಾಶಿವ ಮದರಿಮಠ, ಫಕೀರಸಾ ಬಾಂಡಗೆ, ಬಿ.ಬಿ.ಅಸೂಟಿ, ಲಿಂಗರಾಜ ಗುಡಿಮನಿ, ವಿಜಯಲಕ್ಷ್ಮಿ ಮಾನ್ವಿ, ಅನುರಾಧಾ ಬಸವಾ, ಪ್ರೀತಿ ಎಸ್.ಹೊನ್ನಗುಡಿ, ಮೇಘಾ ಮುದಗಲ್ಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.