
ಗದಗ: ‘ಬಣಜಿಗ ಸಮಾಜದವರು ಬಸವಣ್ಣವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಭಕ್ತಿ, ಸೇವೆ, ಶಿಕ್ಷಣ ರಂಗದಲ್ಲಿ ಪ್ರಗತಿ ಸಾಧಿಸಬೇಕು’ ಎಂದು ರಾಜ್ಯ ಆದಾಯ ತೆರಿಗೆ ಇಲಾಖೆ ಆಯುಕ್ತ ಜಗದೀಶ ಬಳಗಾನೂರ ಹೇಳಿದರು.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಘಟಕ, ಮಹಿಳಾ ಘಟಕ, ಯುವ ಘಟಕ ಹಾಗೂ ಬಸವ ಭವನ ಕಟ್ಟಡ ಸಮಿತಿ ಆಶ್ರಯದಲ್ಲಿ ನಗರದಲ್ಲಿ ನಡೆದ ಬಣಜಿಗ ಸಂಕ್ರಾತಿ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಬಣಜಿಗರಲ್ಲಿ ಸಾಕಷ್ಟು ಕೌಶಲ ಇದೆ. ಆದರೆ, ಮಾರ್ಗದರ್ಶನದ ಕೊರತೆಯಿಂದ ಸಮುದಾಯದ ಯುವಕರಿಗೆ ಅವಕಾಶಗಳ ಸಿಗುತ್ತಿಲ್ಲ. ಅವರು ಸಮಾಜಮುಖಿಯಾಗಲು ಸಮುದಾಯದ ಹಿರಿಯರ ಮಾರ್ಗದರ್ಶನದ ಅವಶ್ಯಕತೆ ಇದೆ’ ಎಂದರು.
ಶಿಕ್ಷಕಿ ಶಿವಗಂಗಾ ದೂದಗಿ ಮಾತನಾಡಿ, ‘ಬಣಜಿಗ ಸಮಾಜಕ್ಕೆ ಶ್ರೀಮಂತ ಇತಿಹಾಸ ಇದೆ. ರಾಜ ಮಹಾರಾಜರ ಕಾಲದಿಂದಲೂ ವ್ಯಾಪಾರ ವಹಿವಾಟು ನಮ್ಮ ಕೈಯಲ್ಲಿದ್ದು ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಬಣಜಿಗ ಕುಲದ ಶರಣರು ಅಕ್ಕಮಹಾದೇವಿ, ಮುಕ್ತಾಯುಕ್ತ, ಅಜಗಣ್ಣ, ಶಾಂತದೇವಿ ಮಾಳವಾಡ, ಜಯದೇವಿತಾಯಿ ಲಿಗಾಡೆ, ತೋಂಟದ ಸಿದ್ದಲಿಂಗಶ್ರೀಗಳು 400 ಜಾತಿ ಜಂಗಮ ಮಠಾಧೀಶರಿಗೆ ದೀಕ್ಷೆ ಕೊಟ್ಟಿದ್ದಾರೆ. ಏಳು ಮುಖ್ಯಮಂತ್ರಿಗಳನ್ನು ಕೊಟ್ಟ ಸಮಾಜ, ಅನೇಕ ಮುತ್ಸದ್ಧಿ ರಾಜಕಾರಣಿಗಳನ್ನು ಹೊಂದಿದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಐ.ಬಿ.ಕೊಟ್ಟೂರಶಟ್ಟರ, ವೀರಣ್ಣ ಮಳಗಿ, ಕಿರಣ ಭೂಮಾ, ನಾಗೇಶ ಸವಡಿ, ಬಿ.ಬಿ.ಅಸೂಟಿ, ಸುರೇಶ ಬಿ. ಅಂಗಡಿ, ರಾಜಣ್ಣ ಕುರಡಗಿ, ಚೇತನ ಅಂಗಡಿ, ಯಳಮಲಿ, ಸಿ.ಎಸ್.ಗದಗ, ಬಸವರಾಜ ಶಿ.ಅಂಗಡಿ, ರವಿಕುಮಾರ ಪಟ್ಟಣಶೆಟ್ಟಿ, ಈಶ್ವರ ಸಿ. ಮುನವಳ್ಳಿ ಇದ್ದರು.
ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಸಮುದಾಯದ ಮಹಿಳೆಯರು, ಮಕ್ಕಳಿಂದ ಜನಪದ ಹಾಡು, ನೃತ್ಯ ಸೇರಿದಂತೆ ವಿವಿಧ ಬಗೆಯ ಕಲಾ ಪ್ರದರ್ಶನಗಳು ನಡೆದವು. ಹರ್ಲಾಪೂರದ ಕಲಾ ತಂಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.