ಗದಗ: ಮುಂಗಡ ಹಣ ನೀಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಕರೆತಂದಿದ್ದ 28 ಮಂದಿ ಕಾರ್ಮಿಕರನ್ನು ಜಿಲ್ಲಾಡಳಿತ ಮುಕ್ತಗೊಳಿಸಿ, ಅವರನ್ನು ಸ್ವಂತ ಊರಿಗೆ ಕಳುಹಿಸಿಕೊಟ್ಟಿದೆ.
ಇಲ್ಲಿನ ಮಲ್ಲಸಮುದ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ತೆಲಂಗಾಣ ರಾಜ್ಯದ ಕಾರ್ಮಿಕರನ್ನು ಜೀತಕ್ಕಿಟ್ಟು ದುಡಿಸಿಕೊಳ್ಳುತ್ತಿರುವ ಕುರಿತಂತೆ ತೆಲಂಗಾಣದ ರಾಷ್ಟ್ರೀಯ ಆದಿವಾಸಿ ಐಕ್ಯತಾ ಸಂಘದ ಅಧ್ಯಕ್ಷ ವಾಸುದೇವ ರಾವ್ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಜತೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅವರ ಸಮಕ್ಷದಲ್ಲಿ ಕಾರ್ಮಿಕರನ್ನು ವಿಚಾರಿಸಲಾಗಿ, ಇಲ್ಲಿದ್ದ ಒಟ್ಟು 28 ಮಂದಿ ಕಾರ್ಮಿಕರಿಗೆ ಮುಂಗಡ ಹಣ ನೀಡಿ ತೆಲಂಗಾಣದಿಂದ ಕರೆತರಲಾಗಿತ್ತು. ಮುಂಗಡ ಹಣ ನೀಡಿದ್ದರಿಂದಾಗಿ ಗುತ್ತಿಗೆದಾರ ಅವರಿಗೆ ಕೂಲಿ ನೀಡುತ್ತಿರಲಿಲ್ಲ. ಕೆಲಸ ಮಾಡಿದ ದಿನದ ಕೂಲಿಯನ್ನು ಮುಂಗಡ ಹಣದಲ್ಲಿ ಕಳೆಯುತ್ತಿದ್ದ’ ಎಂದು ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
‘ಈ ರೀತಿಯ ವೇತನ ಕಾರ್ಮಿಕರನ್ನು ಮುಕ್ತಗೊಳಿಸಿ, ಗುತ್ತಿಗೆದಾರನ ವಿರುದ್ಧ ಜೀತ ಪದ್ಧತಿ ಅಧಿನಿಯಮ 1976ರ ನಿಯಮಗಳ ಪ್ರಕಾರ ಕ್ರಮ ಜರುಗಿಸಲಾಗಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.