ADVERTISEMENT

ಗುಣಮುಖರ ಸಂಖ್ಯೆ ಏರಿಕೆ; ತಗ್ಗಿದ ಆತಂಕ

2 ದಿನದಲ್ಲಿ 6 ಮಂದಿ ಆಸ್ಪತ್ರೆಯಿಂದ ಬಿಡುಗಡೆ; 22ಕ್ಕಿಳಿದ ಸಕ್ರಿಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಮೇ 2020, 15:35 IST
Last Updated 29 ಮೇ 2020, 15:35 IST
ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ ಮಹಿಳೆಯರನ್ನು ಕೋವಿಡ್‌ –19 ನಿಗದಿತ ಆಸ್ಪತ್ರೆಯ ವೈದ್ಯರು ಅಭಿನಂದಿಸಿದರು
ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ ಮಹಿಳೆಯರನ್ನು ಕೋವಿಡ್‌ –19 ನಿಗದಿತ ಆಸ್ಪತ್ರೆಯ ವೈದ್ಯರು ಅಭಿನಂದಿಸಿದರು   

ಗದಗ: ರಾಜ್ಯದಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ 29 ಜಿಲ್ಲೆಗಳ ಪಟ್ಟಿಯಲ್ಲಿ ಸದ್ಯ ಗದಗ ಜಿಲ್ಲೆ 21ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಇದೇ ಅವಧಿಯಲ್ಲಿ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿರುವುದು, ಜಿಲ್ಲಾಡಳಿತಕ್ಕೆ, ಸಾರ್ವಜನಿಕರಿಗೆ ತುಸು ಸಮಾಧಾನ ತಂದಿದೆ.

ಸದ್ಯ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22ಕ್ಕೆ ತಗ್ಗಿದೆ. ಗುರುವಾರ 5 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾದರೆ, ಶುಕ್ರವಾರ ಸೋಂಕು ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ 35 ವರ್ಷದ ಮಹಿಳೆ (ಪಿ–1567) ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದ ಇವರಿಗೆ ಸೋಂಕು ಕಾಣಿಸಿಕೊಂಡಿದ್ದರಿದ ಮೇ 21ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜಿಲ್ಲೆಯಲ್ಲಿ ಹೊರರಾಜ್ಯದಿಂದ ಬಂದವರಲ್ಲಿ ಮೊದಲ ಪಾಸಿಟಿವ್‌ ಪ್ರಕರಣ ಮೇ 12ರಂದು ವರದಿಯಾಗಿತ್ತು. ಗುಜರಾತ್‌ನಿಂದ ಬಂದ ವ್ಯಕ್ತಿಯಲ್ಲಿ ಮೊದಲ ಬಾರಿ ಸೋಂಕು ಪತ್ತೆಯಾಗಿತ್ತು. ಮೇ 23ರಂದು ಒಂದೇ ದಿನ 15 ಮಂದಿಗೆ ಕೋವಿಡ್‌–19 ದೃಢಪಟ್ಟಿತ್ತು. ಇವರಲ್ಲಿ 9 ಮಂದಿ ಸ್ಥಳೀಯರಾಗಿದ್ದರೆ, ಇನ್ನುಳಿದ 6 ಮಂದಿ ಹೊರ ರಾಜ್ಯಗಳಿಂದ ಬಂದವರಾಗಿದ್ದರು. ಮೇ 23ರ ನಂತರ ಜಿಲ್ಲೆಯಲ್ಲಿ ಯಾವುದೇ ಹೊಸ ಕೊರೊನಾ ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ.

ADVERTISEMENT

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 35 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರದಲ್ಲಿ ಒಂದು ಮರಣ ಸಂಭವಿಸಿದೆ. 12 ಮಂದಿ ಸಂಪುರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಇನ್ನೂ 22 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಹಜ ಸ್ಥಿತಿಗೆ ಜನಜೀವನ: ನಾಲ್ಕನೆಯ ಹಂತದ ಲಾಕ್‌ಡೌನ್‌ ಮುಗಿಯಲು ಇನ್ನೂ ಒಂದು ದಿನ ಬಾಕಿ ಇದೆ. ಆದರೆ, ಜಿಲ್ಲೆಯಲ್ಲಿ ವಾರದ ಹಿಂದಿನಿಂದಲೇ ಜನಜೀವನ ಸಹಜ ಸ್ಥಿತಿಗೆ ಮರಳಿರುವ ವಾತಾವರಣ ನಿರ್ಮಾಣವಾಗಿದೆ. ಕಂಟೈನ್‌ಮೆಂಟ್‌ ಪ್ರದೇಶವಾದ ಗದುಗಿನ ಗಂಜಿಬಸವೇಶ್ವರ ಓಣಿ ಪ್ರದೇಶದಲ್ಲಿ ಒಂದಿಷ್ಟು ನಿರ್ಬಂಧ ಹೊರತುಪಡಿಸಿದರೆ ಜಿಲ್ಲೆಯ ಇನ್ನುಳಿದ ಯಾವುದೇ ಭಾಗದಲ್ಲೂ ಯಾವುದೇ ನಿರ್ಬಂಧ ಇಲ್ಲ. ಸಂಜೆ 7 ಗಂಟೆಯ ನಂತರವೂ ಜನರ ಓಡಾಟ ನಿರಾತಂಕವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಅಂತರ ಪಾಲಿಸುವುದರ ಮೇಲೆ ನಿಗಾ ವಹಿಸುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಮಾಸ್ಕ್‌ ಧರಿಸುತ್ತಿರುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.