
ಮುಳಗುಂದ: ‘ಪ್ರಸ್ತುತ ದಿನಮಾನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಪರ್ಯಾಯ ಆದಾಯ ಮೂಲಗಳ ಅಗತ್ಯತೆ ಹೆಚ್ಚಾಗಿದೆ. ಹೈನೋದ್ಯಮ ರೈತರಿಗೆ ಉತ್ತಮ ಆದಾಯ ನೀಡುವ ಸಹಾಯಕ ಉದ್ಯಮವಾಗಿ ಬೆಳೆಯುತ್ತಿದೆ. ಕಡಿಮೆ ವೆಚ್ಚದಲ್ಲಿ ಆರಂಭಿಸಬಹುದಾದ ಈ ಉದ್ಯಮ, ಕೃಷಿಗೆ ಪೂರಕವಾಗಿದ್ದು ಪರಿಸರ ಸಂರಕ್ಷಣೆಯಲ್ಲಿಯೂ ಮಹತ್ವದ ಪಾತ್ರವಹಿಸುತ್ತದೆ’ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಹೇಳಿದರು.
ಇಲ್ಲಿಗೆ ಸಮೀಪದ ಕಣವಿ ಗ್ರಾಮದಲ್ಲಿ ಗದಗ ಜಿಲ್ಲಾ ಪಂಚಾಯಿತಿ ಪಶುಪಾಲನಾ ಮತ್ತು ಪಶು ಸೇವಾ ಇಲಾಖೆ, ಸಹಕಾರಿ ಹಾಲಿ ಉತ್ಪಾದಕರ ಸಂಘಗಳ ಒಕ್ಕೂಟ, ಕೆ.ಸಿ.ಸಿ ಬ್ಯಾಂಕ್ ಹಾಗೂ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಮಿಶ್ರತಳಿ ಹಸುಗಳ ಅಧಿಕ ಹಾಲು ಇಳುವರಿ ಸ್ಪರ್ಧೆ, ಬೃಹತ್ ಜಾನುವಾರು ಪ್ರದರ್ಶನ ಹಾಗೂ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಕಪ್ಪತಗುಡ್ಡ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ‘ಹಿಂದೆ ಪ್ರೀತಿ, ನಂಬಿಕೆ, ವಿಶ್ವಾಸದ ಮೇಲೆ ಜೀವನ ನಡೆಯುತ್ತಿತ್ತು, ಹಣದ ವ್ಯಾಮೋಹ ಇರಲಿಲ್ಲ. ಇಂದು ಎಲ್ಲವೂ ಬದಲಾಗಿ, ಎಲ್ಲರೂ ನೌಕರಿ ಎಂದು ನಗರ ಪ್ರದೇಶಗಳಿಗೆ ಸೇರಿ ಹಳ್ಳಿಗಳು ಅನಾಥಾಶ್ರಮವಾಗಿವೆ. ಮಕ್ಕಳನ್ನ ಒಕ್ಕಲುತನದಿಂದ ದೂರವಿಟ್ಟು, ಶಿಕ್ಷಣ, ನೌಕರಿ ಬಗ್ಗೆ ತಿಳಿಸಿದೇವು. ಒಕ್ಕಲತನ ಶ್ರೇಷ್ಠ, ವ್ಯವಹಾರ ಮಧ್ಯಮ, ನೌಕರಿ ಕನಿಷ್ಠ ಎಂದು ಹಿಂದೆ ಹಿರಿಯರು ಹೇಳುತ್ತಿದ್ದರು. ನೌಕರಿ ಎನ್ನುವುದು ಗುಲಾಮಗಿರಿ, ಆದರೆ ಒಕ್ಕಲತನದಲ್ಲಿ ಸ್ವಾತಂತ್ರ್ಯವಿದೆ’ ಎಂದ ಅವರು ಸಾವಯವ ಕೃಷಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎಸ್.ಪಾಟೀಲ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಎಚ್.ಬಿ.ಹುಲಗಣ್ಣವರ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಎಚ್.ಜಿ.ಹಿರೇಗೌಡ್ರ ಮಾತನಾಡಿದರು. ಮಿಶ್ರ ತಳಿ ಹಸುಗಳ ಅಧಿಕ ಹಾಲು ಸ್ಪರ್ಧೆಯಲ್ಲಿ ವಿಜೇತರಾದ ರೈತರಿಗೆ ಹಾಗೂ ಜಾನುವಾರ ಪ್ರದರ್ಶನದಲ್ಲಿ ವಿಜೇತರಾದ ರೈತರಿಗೆ ಬಹುಮಾನ ವಿತರಿಸಲಾಯಿತು.
ರೈತರಾದ ಪರಪ್ಪ ಕೋಳಿವಾಡ, ಎಂ.ಡಿ.ಬಟ್ಟೂರ, ಸಿ.ಬಿ.ದೊಡ್ಡಗೌಡ್ರ, ಎಸ್.ವೈಕೋರಿ, ಮಲಕಾಜಪ್ಪ ನವಲಗುಂದ, ಪ್ರಕಾಶ ಉಳವಿ, ಡಿ.ಟಿ.ಕಳಸದ, ಡಾ.ರಾಕೇಶ ತಲ್ಲೂರ, ಕೃಷಿ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು, ರೈತರು ಇದ್ದರು.