ಡಂಬಳ: ‘ಅಮ್ಮಾ, ಅಪ್ಪ ಎಲ್ಲಿ? ಎಂದು ಆರು ವರ್ಷ ಮಗ ಕೇಳುವಾಗ ಕರುಳು ಕಿವುಚಿದಂತಾಗಿ ದುಃಖ ಒತ್ತರಿಸಿಕೊಂಡು ಬರುತ್ತದೆ’ ಎಂದು ಕವಿತಾ ಗದ್ಗದಿತರಾದರು.
ನನ್ನ ಪತಿ ಮಕ್ಕಳ ಬಗ್ಗೆ ಬೆಟ್ಟದಷ್ಟು ಕನಸು ಕಂಡಿದ್ದರು. ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ಒಳ್ಳೆ ಸಂಸ್ಕಾರ ನೀಡೋಣ ಎನ್ನುತ್ತಿದ್ದರು. ನಾವು ದುಡಿಯುವುದು, ಬದುಕುವುದು ಮಕ್ಕಳಿಗಾಗಿಯೇ ಎಂದು ಪ್ರತಿದಿನವೂ ಹೇಳುತ್ತಿದ್ದರು. ಶಿಕ್ಷಕರಾಗಿದ್ದುಕೊಂಡು ಸಮಾಜಮುಖಿಯಾಗಿ ಸರಳ ಜೀವನ ಜೀವನ ನಡೆಸುತ್ತಿದ್ದ ನನ್ನ ಪತಿ ನೀಲಪ್ಪ ಲಮಾಣಿ ಅವರ ಒಳ್ಳೆತನವನ್ನು ನೋಡಿ ದೇವರು ಕೂಡ ಸಹಿಸಿಕೊಳ್ಳದಾದ. ಅವರು ಈಚೇಗೆ ಕೋವಿಡ್ನಿಂದ ಮೃತಪಟ್ಟರು’ ಎಂದು ಪತ್ನಿ ಕವಿತಾ ಮತ್ತೆ ಕಣ್ಣೀರಾದರು.
ನಮಗೆ ಆರು ವರ್ಷದ ಶರತ್, ಒಂದು ವರ್ಷದ ಯಶೋದಾ ಎಂಬ ಮಕ್ಕಳಿದ್ದಾರೆ. ಪತಿ ನೀಲಪ್ಪ ಅವರು ಲಾಕ್ಡೌನ್ ಸೇರಿದಂತೆ ಉಳಿದ ದಿನಗಳಲ್ಲೂ ತಮ್ಮ ಬಹುತೇಕ ಸಮಯವನ್ನು ಕುಟುಂಬದವರೊಂದಿಗೆ ಕಳೆಯುತ್ತಿದ್ದರು.
ಮಕ್ಕಳು ಅಪ್ಪನನ್ನು ನೆನೆದು, ‘ಅಮ್ಮಾ ಅಪ್ಪ ಎಲ್ಲಿ?’ ಎಂದು ಕೇಳುತ್ತವೆ. ಅಪ್ಪಾ, ಅಪ್ಪಾ... ಎಂದು ಕಣ್ಣೀರು ಸುರಿಸುತ್ತೇವೆ. ತಂದೆಯನ್ನು ನೆನೆದು ಮಕ್ಕಳು ನಾನು ಉತ್ತರ ಕೊಡಲಾರದಂತಹ ಪ್ರಶ್ನೆ ಕೇಳುತ್ತವೆ.
ಪ್ರಪಂಚದ ಜ್ಞಾನವನ್ನು ಅರಿಯದ ಒಂದು ವರ್ಷದ ಮಗಳ ಮುಗ್ಧ ಮುಖ ನೋಡಿದರೆ ನೂರಾರು ನೋವು, ಸಂಕಟಗಳು ಒಮ್ಮೆಲೆ ನುಗ್ಗಿ ಬರುತ್ತವೆ. ಅವರಿದ್ದಾಗ ನಿತ್ಯವೂ ಮನೆಯಲ್ಲಿ ಉತ್ಸಾಹ ಮನೆ ಮಾಡಿತ್ತು. ನಗು ನಗುತಾ ಜೀವನ ಸಾಗುತ್ತಿತ್ತು. ಈಗ ಕುಟುಂಬದ ಯಜಮಾನ ಇಲ್ಲದ ಮನೆಯಲ್ಲಿ ನೀರವ ಮೌನ ತುಂಬಿಕೊಂಡಿದೆ. ತಂದೆಯೊಂದಿಗೆ ಮಕ್ಕಳು ಬೆಳೆಸಿಕೊಳ್ಳುವ ಪ್ರೀತಿ, ಬಾಂದವ್ಯ ಹಾಗೂ ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು’ ಎಂದು ಎಂದು ಕವಿತಾ ನೀಲಪ್ಪ ಲಮಾಣಿ ಮೌನಕ್ಕೆ ಶರಣಾದರು.
-ಲಕ್ಷ್ಮಣ ಎಚ್ ದೊಡ್ಡಮನಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.