ಗದಗ: ‘ಪತ್ರಿಕೆಗಳು ಶೋಷಿತ ಜನರ ಧ್ವನಿಯಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಹೇಳಿದರು.
ನಗರದಲ್ಲಿ ಭಾನುವಾರ ನಡೆದ ‘ಪ್ರಜಾಪಥ’ ದಿನಪತ್ರಿಕೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ದಿನಗಳಲ್ಲಿ ಪತ್ರಿಕೆ ನಡೆಸುವುದು ಕಷ್ಟದಾಯಕ. ಅದರಲ್ಲೂ ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ಪತ್ರಿಕೆಗಳು ಅಸ್ತಿತ್ವ ಉಳಿಸಿಕೊಳ್ಳಲು ಶ್ರಮಪಡಬೇಕಿದೆ. ಇದರ ಮಧ್ಯೆಯೂ ಪ್ರಜಾಪಥ ದಿನಪತ್ರಿಕೆಯು ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗಮನ ಸೆಳೆಯುತ್ತಿದೆ. ಇದರೊಂದಿಗೆ ಪತ್ರಿಕೆಯ ಸಂಪಾದಕರು ಜಿಲ್ಲೆಯ ಮೊದಲ ಮಹಿಳಾ ಸಂಪಾದಕರಿದ್ದು, ಅವರಿಗೆ ಮಹಿಳಾ ದಿನಾಚರಣೆಯಂದು ಜಿಲ್ಲಾಡಳಿತದಿಂದ ಗೌರವ ಕೂಡ ನೀಡಲಾಗಿದೆ’ ಎಂದರು.
ಉತ್ತಮ ಸುದ್ದಿಗಳ ಮೂಲಕ ದಿನಪತ್ರಿಕೆಯು ಇನ್ನಷ್ಟು ಜನಮಾನಸಕ್ಕೆ ತಲುಪಲಿ ಎಂದು ಹಾರೈಸಿದರು.
ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ಮಹೇಶ ದಾಸರ ಮಾತನಾಡಿ, ಪತ್ರಿಕೆಗಳು ಮನುಷ್ಯನ ಜ್ಞಾನಾರ್ಜನೆ ಹೆಚ್ಚಿಸುತ್ತವೆ. ಐದನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಪ್ರಜಾಪಥ ದಿನಪತ್ರಿಕೆ ಶತಮಾನೋತ್ಸವ ಆಚರಿಸಲಿ ಎಂದರು.
ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ, ಸರ್ಕಾರದ ಜಾಹೀರಾತುಗಳು ಕೂಡ ಪತ್ರಿಕೆಗಳಿಗೆ ಜೀವಾಳ. ಪತ್ರಿಕೆ ಇನ್ನಷ್ಟು ಪ್ರಸಾರ ಸಂಖ್ಯೆಯೊಂದಿಗೆ ಬೆಳವಣಿಗೆ ಕಾಣಲಿ ಎಂದು ಹೇಳಿದರು.
ಸಂಪಾದಕಿ ರೇಷ್ಮಾ ಆರ್. ಹೆಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ವೀರೇಶ ಎಂ. ಹರ್ಲಾಪೂರ ಅವರು ಕವನ ವಾಚಿಸಿದರು. ರಾಜು ಎಂ. ಹೆಬ್ಬಳ್ಳಿ ಸ್ವಾಗತಿಸಿದರು. ನ್ಯಾಯವಾದಿ ಮಹೇಶ ಹಾಳಕೇರಿ ನಿರೂಪಿಸಿದರು. ಎಸ್.ಎನ್. ಸೊರಟೂರ ವಂದಿಸಿದರು.
ಹೇಮಂತ ದಾಸರ, ದ್ಯಾಮನಗೌಡ ದಿಡ್ಡಿಮನಿ, ಎಂ.ವೈ. ರೋಣದ, ಎಚ್.ಎಫ್. ನದಾಫ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.