
ಶಿರಹಟ್ಟಿ: ತಾಲ್ಲೂಕಿನ ದಲಿತ ಸಮುದಾಯ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಸೋಮವಾರ ಉಪ ತಹಶೀಲ್ದಾರ್ ಎಚ್.ಜೆ. ಭಾವಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿ ತಾಲ್ಲೂಕು ಸಂಚಾಲಕ ರವಿ ಗುಡಿಮನಿ ಹಾಗೂ ಯುವ ಮುಖಂಡ ಮುತ್ತು ಭಾವಿಮನಿ ಮಾತನಾಡಿ, ‘ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ದಲಿತ ಸಮುದಾಯವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಅಧಿಕಾರಿಗಳು ಈ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದರು.
ತಾಲ್ಲೂಕಿನಾದ್ಯಂತ ದಲಿತ ಸಮುದಾಯಕ್ಕೆ ಅವಶ್ಯವಿರುವ ಸ್ಥಳದಲ್ಲಿ ಸ್ಮಶಾನ ಭೂಮಿ ಮಂಜೂರು ಹಾಗೂ ಈಗಿರುವ ಸ್ಮಶಾನಗಳನ್ನು ಅಭಿವೃದ್ಧಿಪಡಿಸಬೇಕು. ಕೆಲವು ಗ್ರಾಮಗಳಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆಯಲ್ಲಿದ್ದು, ತಡೆಗಟ್ಟಲು ಜಿಲ್ಲಾಡಳಿತ ಕಠಿಣ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ದಲಿತರಿಗೆ ಮಂಜೂರಾದ ನಿವೇಶನ ಹಕ್ಕು ಪತ್ರ ವಿತರಣೆ, ರಸ್ತೆ ಅಭಿವೃದ್ಧಿ, ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆ ಅನುದಾನ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಸಂಘಟನೆ ಮಹಿಳಾ ಸಂಚಾಲಕಿ ಅಂಜನಾದೇವಿ ಮ್ಯಾಗೇರಿ, ಎಂ.ಕೆ. ಲಮಾಣಿ, ಪ್ರಕಾಶ್ ಬಡಣ್ಣೆವರ, ಚಂದ್ರು ಪೊತರಾಜ, ಹನುಮಂತಪ್ಪ ಬಡ್ಡೆಪ್ಪನವರ್, ಅಶೋಕ್ ಬಡವರ, ರಮೇಶ್ ಗುಡಿಮನಿ, ಶಿವನಗೌಡ ಪಾಟೀಲ, ಯಲ್ಲಪ್ಪ ಗೋಡೆಣ್ಣವರ, ಪರಮೇಶ ಗುಡಿಮನಿ, ಸುಭಾಷ್ ಮುಳಗುಂದ, ಮರಿಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.