ಗದಗ: ‘ದೇಶದ ಅಭಿವೃದ್ಧಿಗೆ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ನಮಗೆ ಮೋದಿ ಅವಶ್ಯಕತೆ ಇರುವ ಕಾರಣ ಬಿಜೆಪಿ ಅಭ್ಯರ್ಥಿಗಳನ್ನೇ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ. ಗೆಲ್ಲಿಸಿದ ನಂತರ ನೂತನ ಸಂಸದರಿಗೆ ನಿದ್ದೆ ಮಾಡಲು ಬಿಡುವುದಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವಂತೆ ದುಂಬಾಲು ಬೀಳುತ್ತೇವೆ’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮೋದಿ ಹೆಸರು ಹೇಳಿಕೊಂಡು ಗೆದ್ದರಷ್ಟೇ ಸಾಕಾಗುವುದಿಲ್ಲ. ಇನ್ನು ಮುಂದೆ ಯಾವ ಸಂಸದರೂ ನಿಷ್ಕ್ರೀಯವಾಗಿ ಓಡಾಡಿಕೊಂಡು ಇರಲು ಬಿಡುವುದಿಲ್ಲ’ ಎಂದು ತಿಳಿಸಿದರು.
‘2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಸಂಸದರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕಿದೆ. ಮೂಲಸೌಕರ್ಯ, ಸರಿಯಾದ ವ್ಯವಸ್ಥೆಗಳು ಇಲ್ಲದ ಕಾರಣಕ್ಕೆ ಖಾಸಗಿ ಶಾಲೆಗಳು, ಖಾಸಗಿ ಆಸ್ಪತ್ರೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು, ಬಡವರ ರಕ್ತ ಹೀರುತ್ತಿವೆ. ಜನರ ಹಣವನ್ನು ಲೂಟಿ ಮಾಡುತ್ತಿವೆ. ಇದನ್ನು ತಪ್ಪಿಸಲು ಸಂಸದರು ಶಾಲೆ ಮತ್ತು ಆಸ್ಪತ್ರೆಗಳಿಗೆ ಅತ್ಯುತ್ತಮ ಸೌಕರ್ಯ ಒದಗಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.
‘ಗದಗ ಜಿಲ್ಲೆಯಲ್ಲಿರುವ ಲಂಬಾಣಿ ತಾಂಡಾಗಳಲ್ಲಿ ಕ್ರಿಶ್ಚಿಯನ್ನರು ದೊಡ್ಡ ಮಟ್ಟದಲ್ಲಿ ಮತಾಂತರ ನಡೆಸುತ್ತಿದ್ದಾರೆ. ಸಂಸದರು ಪ್ರತಿಯೊಂದು ತಾಂಡಾಕ್ಕೂ ಭೇಟಿ ನೀಡಿ, ಮತಾಂತರ ತಡೆಯುವ ಕೆಲಸ ಮಾಡಬೇಕು. ಮೋದಿ ಹೆಸರಿನಲ್ಲಿ ಗೆಲ್ಲುವದರ ಜತೆಗೆ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು’ ಎಂದು ತಿಳಿಸಿದರು.
‘ಚುನಾವಣೆಯಲ್ಲಿ ಗೆದ್ದು ಬಂದ ನಂತರ ತಮ್ಮ ಗೆಲುವಿಗಾಗಿ ಶ್ರಮಿಸಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರ ಮೇಲಿರುವ ಪ್ರಕರಣಗಳನ್ನು ರದ್ದುಪಡಿಸಲು ಶ್ರಮಿಸಬೇಕು. ಲೂಟಿ ಮಾಡುತ್ತಿರುವ ವಕ್ಛ್ ಬೋರ್ಡ್ ಸಂಸ್ಥೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಬೇಕಿರುವ ಅಗತ್ಯ ಕಾನೂನು ರಚನೆಗೆ ಸಂಸತ್ನಲ್ಲಿ ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.
ಶ್ರೀರಾಮ ಸೇನೆ ಮುಖಂಡ ರಾಜು ಖಾನಪ್ಪನವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.