
ನರಗುಂದ: ಬೈಕ್ ಸವಾರರು ಮೊಬೈಲ್ ಬಳಕೆ ಬಗ್ಗೆ ಜಾಗೃತಿ ವಹಿಸಬೇಕು. ಹೆಚ್ಚಿನ ಮೊಬೈಲ್ ಬಳಕೆ ಅಪರಾಧಗಳಿಗೆ ರಹದಾರಿ ಮಾಡಿಕೊಡುತ್ತದೆ ಎಂದು ಸಿಪಿಐ ಮಂಜುನಾಥ ನಡುವಿನಮನಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿದ ಅವರು, ಬೈಕ್ ಸವಾರರು ಹೆಲ್ಮೆಟ್, ಕಾರು ಸವಾರರು ಸೀಟ್ ಬೆಲ್ಟ್ ಧರಿಸಿರಬೇಕು. ಇವುಗಳು ಪ್ರಾಣ ರಕ್ಷಣೆಗೆ ಸಹಕಾರಿ ಎಂದರು.
ಹಿರಿಯ ಉಪನ್ಯಾಸಕ ಎಂ.ಪಿ .ಕುಲಕರ್ಣಿ ಮಾತನಾಡಿ, ಸಂಚಾರಿ ನಿಯಮಗಳನ್ನು ಎಲ್ಲರೂ ಪಾಲಿಸಬೇಕು. ಹಿರಿಯರ ಮಾತನ್ನು ಗೌರವಿಸಿ ಭವಿಷ್ಯ ಉಜ್ವಲ ಗೊಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿಯಬೇಕೆಂದು ಸಲಹೆ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸಿ.ಎಸ್. ಸುಳ್ಳದ ಅವರು, ‘ಬುದ್ಧ ಬಸವ ಗಾಂಧಿ ನೆಲದಲ್ಲಿ ಜನಿಸಿದ ನಾವು ಯಾರಿಗೂ ಅನ್ಯಾಯವಾಗದಂತೆ ನಡೆದುಕೊಳ್ಳಬೇಕು. ಇನ್ನೊಬ್ಬರು ನಮ್ಮಂತೆ ಮನುಷ್ಯರು ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು. ಅಪರಾಧ ಎಸಗದೆ ದೇಶ ರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಎಂ.ಲೆಂಕೆನವರ, ಆನಂದ ಹವಾಲ್ದಾರ, ಸುಧೀರ ಸಜ್ಜನ, ಸುಜಾತಾ ಮೆಳವಂಕಿ, ದತ್ತಣ್ಣ ಜಾಧವ್, ಎನ್.ಎಸ್. ಹಿರೇಮಠ ವಿಶ್ವನಾಥ್ ದೇಶಪಾಂಡೆ ಹಾಗೂ ಕಾಲೇಜು ಸಿಬ್ಬಂದಿ ಇದ್ದರು. ಶರಣು ಪೂಜಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.