ADVERTISEMENT

ವಿಶ್ವ ಅಪ್ಪಂದಿರ ದಿನ: ಅಪ್ಪನನ್ನು ಮರೆಯಲಿ ಹೆಂಗ?

​ಪ್ರಜಾವಾಣಿ ವಾರ್ತೆ
Published 20 ಜೂನ್ 2021, 2:50 IST
Last Updated 20 ಜೂನ್ 2021, 2:50 IST
ದಿ.ಬಸಲಿಂಗಪ್ಪ ಅಂಗಡಿ
ದಿ.ಬಸಲಿಂಗಪ್ಪ ಅಂಗಡಿ   

ನರಗುಂದ: ‘ನಾನು, ನಮ್ಮಣ್ಣ ಪದವಿ ಕಲಿತು ನೌಕರಿ ಮಾಡಲಿಕ್ಕೆ ಅಪ್ಪನ ಬೆಂಬಿಡದ ಪ್ರಯತ್ನ, ಶ್ರಮವೇ ಕಾರಣ. ಅವರು ಈಗ ಇಲ್ಲವಾಗಿರುವುದು ನಮ್ಮ ಮನೆಯ ಆಧಾರಸ್ತಂಭ ಕಳಚಿ ಹೋದಂತಾಗಿದೆ. ಅವರನ್ನು ಹೆಂಗ ಮರೆಯಲಿಕ್ಕೆ ಆಗುತ್ತೆ?...

ಚಿಕ್ಕನರಗುಂದದ ಬಸವರಾಜ ಅಂಗಡಿ ತನ್ನಪ್ಪನ ಸಾವಿನ ಬಗ್ಗೆ ಮನದಾಳದ ಮಾತನ್ನು ಆಡಿದ್ದು ಹೀಗೆ.

ಚಿಕ್ಕನರಗುಂದದ ಬಸಲಿಂಗಪ್ಪ ಸಿದ್ದಲಿಂಗಪ್ಪ ಅಂಗಡಿ ಮೇ 13ರಂದು ಕೋವಿಡ್‍ನಿಂದ ಜಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದನ್ನು ವಿಶ್ವ ತಂದೆಯಂದಿರ ದಿನದಂದು ನೆನಪಿಸಿಕೊಂಡ ಬಸವರಾಜ, ‘ನಮ್ಮ ನಿರ್ಲಕ್ಷವೋ ಏನೋ ಒಟ್ಟಿನಲ್ಲಿ ಅಪ್ಪನನ್ನು ಕೋವಿಡ್ ಬಲಿ ಪಡೆದಿದೆ. ಆದರೆ ಅವರು ಕೃಷಿ ಕೆಲಸದೊಂದಿಗೆ ನಮ್ಮನ್ನು ಬೆಳೆಸಿದ ರೀತಿ, ಕಲಿಸಿದ ಸಂಸ್ಕಾರ, ನೀಡಿದ ಶಿಕ್ಷಣ ಎಂದಿಗೂ ಮರೆಯಲಾರೆವು’ ಎಂದು ಅಪ್ಪನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

ADVERTISEMENT

‘ಕುಟುಂಬ ಹಾಗೂ ಸಮಾಜದ ಸಮಸ್ಯೆಗಳನ್ನು ತನ್ನ ಚಾಣಾಕ್ಷತನದಿಂದ ಪರಿಹರಿಸುವ ಛಾತಿ ನಮಗಾರಿಗೂ ಬಾರದು. ನಾವಿಬ್ಬರೇ ಗಂಡು ಮಕ್ಕಳು. ನಾನು ಆರೋಗ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್
ಆಗಿ ಕೆಲಸ ಮಾಡಿದರೆ, ಅಣ್ಣ ಶಿವರಾಜ ಬ್ಯಾಂಕ್‍ ಉದ್ಯೋಗಿಯಾಗಿದ್ದಾನೆ. ಇಬ್ಬರೂ ವಾಣಿಜ್ಯ ಪದವೀಧರು. ನಮ್ಮ ತಂದೆ ಕಷ್ಟಗಳ ನಡುವೆ ನಮ್ಮನ್ನು ಈ ಹಂತಕ್ಕೆ ಬೆಳೆಸಿದ್ದಾರೆ. ನಮ್ಮಿಬ್ಬರ ಮದುವೆ ಮಾಡುವುದು ಅವರ ಕನಸಾಗಿತ್ತು, ಅದು ಈಡೇರುವ ಮೊದಲೇ ನಮ್ಮಿಂದ ದೂರವಾಗಿದ್ದು ಕೊನೆವರೆಗೂ ಬಾಧಿಸುತ್ತಲೇ ಇರುತ್ತದೆ’ ಎಂದರು.

‘ಅವ್ವ ನೀಲವ್ವ ಹಾಗೂ ನಾವು ಹುಬ್ಬಳ್ಳಿ, ಗದುಗಿನಲ್ಲಿ ಸುಮಾರು 11 ದಿನಗಳ ಕಾಲ ಕೋವಿಡ್‍ಗೆ ಚಿಕಿತ್ಸೆ ನೀಡಿದರೂ ಅಪ್ಪನನ್ನು ಉಳಿಸಿಕೊಳ್ಳಲಾಗಲಿಲ್ಲ’ ಎಂದು ಕಣ್ಣೀರು ತಂದುಕೊಂಡರು.

‘ನಮ್ಮ ಚಿಕ್ಕಪ್ಪ ಬಸಲಿಂಗಪ್ಪ ಅವರು ನನ್ನ ಬಿಟ್ಟು ಎಲ್ಲಿಗೂಹೋಗುತ್ತಿರಲಿಲ್ಲ. ಈಗ ನನ್ನ ಕರೆದುಕೊಂಡು ಹೋಗುವವರು ಯಾರು?’ ಎಂದು ಪ್ರಶ್ನೆ ಮಾಡುವ ಸುಹಾಸ್ ಅಂಗಡಿ ಅವರ ಮಾತುಗಳು ಬಸಲಿಂಗಪ್ಪನವರ ಬಗ್ಗೆ ಇದ್ದ ಪ್ರೀತಿಗೆ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.