ಗದಗ: ವರ್ಗ-ವರ್ಣ, ಲಿಂಗಭೇದ- ಜಾತಿಗಳನ್ನು ಅಲ್ಲಗಳೆದು ಸರ್ವರಿಗೂ ಮುಕ್ತವಾಗಿ ಬಾಗಿಲನ್ನು ತೆರೆದಿಟ್ಟಿದ್ದ ಅನುಭವ ಮಂಟಪ ಮುಕ್ತ ವಿಶ್ವವಿದ್ಯಾಲಯವಾಗಿತ್ತು ಎಂದು ಅತ್ತಿವೇರಿಯ ಬಸವಧಾಮದ ಬಸವೇಶ್ವರಿ ಮಾತಾಜೀ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಪ್ರವಚನ ಮಾಲಿಕೆಯಲ್ಲಿ ಮಾತನಾಡಿ, ‘ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸಮಾನತೆಯನ್ನು ತೊಡೆದು ಹಾಕುವಲ್ಲಿ ಹಾಗೂ ಆಧ್ಯಾತ್ಮಿಕ ಜ್ಞಾನವನ್ನು ನೀಡುವಲ್ಲಿ ಅನುಭವ ಮಂಟಪದ ಪಾತ್ರ ಅನುಪಮವಾದದ್ದು. ಶರಣರ ಅನುಭಾವ ಪಡೆದ ಅನೇಕ ಜನರು ಅಪೂರ್ವ ಜ್ಞಾನಿಗಳಾದರು’ ಎಂದು ಹೇಳಿದರು.
‘ಮೂಢನಂಬಿಕೆ, ಕಂದಾಚಾರಗಳನ್ನು ಅಲ್ಲಗಳೆದ ಬಸವೇಶ್ವರರು ಸಾತ್ವಿಕ ಭಕ್ತಿಗೆ ದೇವರು ಒಲಿಯುತ್ತಾನೆಯೇ ವಿನಹ ಅರ್ಥಹೀನ ಆಚರಣೆಗಳಿಂದ ಒಳಿತು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರು. ಅನಾಚಾರವನ್ನು ಬದಿಗೊತ್ತಿ ಸದಾಚಾರ, ಭಕ್ತಿ ಮಾರ್ಗ ತೋರಿಸಿದ ಬಸವೇಶ್ವರರು ಮಹತ್ವದ ಸಾಮಾಜಿಕ ಬದಲಾವಣೆಗೆ ಕಾರಣರಾದರು’ ಎಂದು ಹೇಳಿದರು.
ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಮಹೋತ್ಸವ ಸಮಿತಿ, ಲಿಂಗಾಯತ ಪ್ರಗತಿಶೀಲ ಸಂಘದ ಸದಸ್ಯರು, ಬಸವಾಭಿಮಾನಿಗಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.