ಗದಗ: ಅವಳಿ ನಗರದ ಜನರು ಆಯುಧ ಪೂಜೆ ಹಾಗೂ ವಿಜಯದಶಮಿಯನ್ನು ಅದ್ಧೂರಿಯಾಗಿ ಆಚರಿಸಲು ಮಂಗಳವಾರ ಭರದ ಸಿದ್ಧತೆ ನಡೆಸಿದ್ದು ಕಂಡು ಬಂತು. ಮಾರುಕಟ್ಟೆಯಲ್ಲಿ ಜನದಟ್ಟಣೆ ಅಧಿಕವಾಗಿತ್ತು.
ನಗರದ ನಾಮಜೋಶಿ ರಸ್ತೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಸಾಗಿತು. ಹಬ್ಬ ಆಚರಣೆಗೆ ಬೇಕಿರುವ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಜನರು ಖರೀದಿಸಿರು.
ಆಯುಧಪೂಜೆ ವೇಳೆ ವಾಹನಗಳು, ಯಂತ್ರೋಪಕರಣ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಅಲಂಕರಿಸಿ ಪೂಜಿಸಲು ಜನರು ಹೂವು ಖರೀದಿಗೆ ಮುಗಿಬಿದ್ದಿದ್ದರು. ಹಬ್ಬದ ಅಂಗವಾಗಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಚೆಂಡು ಹೂವು ಒಂದು ಮಾರು ₹60, ಸೇವಂತಿಗೆ ₹50ಕ್ಕೆ ಮಾರಾಟವಾಯಿತು. ಕನಕಾಂಬರ, ಮಲ್ಲಿಗೆ ಬೆಲೆ ₹100 ಇತ್ತು.
ಪೂಜೆಗೆ ಬೇಕಿರುವ ಹಣ್ಣುಗಳ ಬೆಲೆ ತುಸು ದುಬಾರಿಯಾಗಿತ್ತು. ಸೇಬು ಕೆ.ಜಿ. ₹200, ಮೂಸಂಬಿ ₹60, ಕಿತ್ತಳೆ ₹90, ಸಪೋಟಾ ₹60, ಪೈನಾಪಲ್ ₹50ಕ್ಕೆ ಮಾರಾಟವಾದವು. ಏಲಕ್ಕಿ ಬಾಳೆ ₹100, ಪಚ್ಚಬಾಳೆ ಡಜನ್ಗೆ ₹50, ಬಾಳೆಕಂದು, ಮಾವಿನ ಸೊಪ್ಪು ಜೋಡಿಗೆ ₹40ಕ್ಕೆ ಮಾರಾಟವಾದವು.
‘ಹಬ್ಬದ ಖರೀದಿ ಭರಾಟೆ ಈ ಬಾರಿ ಹೆಚ್ಚೇನೂ ಇಲ್ಲ ಅನಿಸಿದೆ. ಜನದಟ್ಟಣೆ ಜಾಸ್ತಿ ಇದ್ದರೂ ಹೂವಿನ ಮಾರಾಟ ಕುಸಿದಿದೆ. ಬುಧವಾರ, ಗುರುವಾರ ವಹಿವಾಟು ಹೆಚ್ಚುವ ನಿರೀಕ್ಷೆ ಇದೆ’ ಎಂದು ಹೂವು ಮಾರುವ ಮಹಿಳೆಯೊಬ್ಬರು ತಿಳಿಸಿದರು.
ಹಬ್ಬದ ಅಂಗವಾಗಿ ಅಗತ್ಯ ವಸ್ತುಗಳ ಖರೀದಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಸಂಚಾರ ವ್ಯವಸ್ಥೆ ಸರಿಪಡಿಸಲು ಪೊಲೀಸರು ಹೆಣಗಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.