
ಗದಗ ತಾಲ್ಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ- ಜಾತ್ರಾಮಹೋತ್ಸವದ ಅಂಗವಾಗಿ ಆರಂಭಗೊಂಡ ಮಹಾತ್ಮರ ಜೀವನ-ದರ್ಶನ ಪ್ರವಚನ ಕಾರ್ಯಕ್ರಮವನ್ನು ಅಡ್ನೂರ-, ರಾಜೂರ-, ಗದಗ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಗದಗ: ‘ಮನುಷ್ಯನ ಜೀವನದ ಕೊನೆಯ ಹಂತವೇ ಮರಣವಾಗಿದೆ. ಅವನ ಸಾವಿನ ಜತೆಗೆ ಯಾವುದೂ ಬರುವುದಿಲ್ಲ. ಅವನ ದೇಹತ್ಯಾಗದ ನಂತರ ಅವನ ಸನ್ನಡತೆ, ಸದಾಚಾರ, ಪರೋಪಕಾರ, ದಾನ, ಧರ್ಮ ಮಾರ್ಗದ ಬದುಕಿನ ಮೌಲ್ಯಗಳು ಉಳಿಯುತ್ತವೆ’ ಎಂದು ಅಡ್ನೂರ-ರಾಜೂರ-ಗದಗ ಬೃಹನ್ಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ-ಜಾತ್ರಾ ಮಹೋತ್ಸವದ ಅಂಗವಾಗಿ ಬಳಗಾನೂರ ಶರಣರ ಮಠದಲ್ಲಿ ಆರಂಭಗೊಂಡ ಮಹಾತ್ಮರ ಜೀವನ-ದರ್ಶನ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಈ ದಿಸೆಯಲ್ಲಿ ಮನುಷ್ಯ ತನ್ನ ಜೀವಿತಾವಧಿಯಲ್ಲಿ ಸರ್ವರಲ್ಲಿ ಸಮಾನತೆ ಕಂಡು ಸಮನ್ವಯತೆ ಬೆಳೆಸಿಕೊಂಡು ಆರೋಗ್ಯಕರ ಜೀವನ ನಿರ್ವಹಿಸಬೇಕು’ ಎಂದರು.
‘ಮನುಷ್ಯನ ಮನಸ್ಸನ್ನು ಹಸನುಗೊಳಿಸಲು ಮಹಾತ್ಮರು, ಪುಣ್ಯಪುರುಷರ ಸ್ಮರಣೆ ಅವಶ್ಯವಿದೆ. ಮಹಾತ್ಮರ ಜೀವನ ದರ್ಶನದ ಸದುಪಯೋಗ ಪಡಿಸಿಕೊಂಡು ಜೀವನದ ಸಾರ್ಥಕತೆ ಪಡೆಯಬೇಕು’ ಎಂದರು.
ಶಿವಶಾಂತವೀರ ಶರಣರು ಮಾತನಾಡಿ, ‘ಮನುಷ್ಯ ಜನ್ಮ ಶ್ರೇಷ್ಠವಾದದ್ದು, ಮನುಷ್ಯ ಮಹಾತ್ಮರ ದಾರ್ಶನಿಕರ ದಾರಿಯಲ್ಲಿ ಸಾಗಿ ಸತ್ಸಂಗ ಮಾಡಿ ತನ್ಮೂಲಕ ಅವರ ಸಿದ್ಧಾಂತಗಳನ್ನು ವಿಚಾರಗಳನ್ನು ಅಳವಡಿಸಿಕೊಂಡು ನಮ್ಮಲ್ಲಿಯ ಅಜ್ಞಾನ ದೂರೀಕರಿಸಿ ಸುಜ್ಞಾನದ ಬೆಳಕನ್ನು ಹೊಂದಬೇಕು’ ಎಂದರು.
ಶರಣರ ಪುಣ್ಯಸ್ಮರಣೆ, ಮಠದ ಜಾತ್ರೆ ಎನ್ನುವುದು ನೆಪಮಾತ್ರ. ಅದರ ಅಡಿಯಲ್ಲಿ ಶರಣರ ಆಧ್ಯಾತ್ಮಿಕ ಸಂದೇಶಗಳನ್ನು ಜನರಲ್ಲಿ ತರುವುದಾಗಿದೆ. ಜಾತ್ರೆ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಸಮಾಜಮುಖಿಯಾಗಿ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಆಯೋಜಿಸುವುದರ ಮೂಲಕ ಭಕ್ತರ ಹಿತಚಿಂತನೆ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ನಿವೃತ್ತ ಉಪನಿರ್ದೇಶಕ ಡಿ.ಐ. ಅಸುಂಡಿ ಚನ್ನವೀರ ಶರಣರ ಪ್ರಭಾವ ಹಾಗೂ ಅವರ ಒಡನಾಟವನ್ನು ಸ್ಮರಿಸಿದರು. ಬಳೂಟಿಗಿಯ ಸಿದ್ದಯ್ಯ ಶಾಸ್ತ್ರೀಗಳಿಂದ ಪ್ರವಚನ ನಡೆಯಿತು. ಮುತ್ತು ಗದಗ, ಶರಣು ಕೆ. ಹಿರೇಮಠ, ಸೋಮನಾಳ ಅವರಿಂದ ಸಂಗೀತಸೇವೆ ಜರುಗಿತು.
ಇದೇ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಡಿ.ಐ.ಅಸುಂಡಿ ದಂಪತಿಯನ್ನು ಗೌರವಿಸಲಾಯಿತು.
ಸವಡಿ ಗ್ರಾಮದ ಎಂ.ಬಿ.ಪರಡ್ಡಿ ಕುಟುಂಬ ವರ್ಗದವರಿಂದ ಹಾಗೂ ಸವಡಿ ಗ್ರಾಮದ ಸಮಸ್ತ ಭಕ್ತರಿಂದ ಶಿವಶಾಂತವೀರ ಶರಣರ ತುಲಾಭಾರ ನಡೆಯಿತು. ಬಳಗಾನೂರಿನ ವೇದಾ ಶ್ರೀಧರ ಬಡಿಗೇರ, ವಿರಾಜ್ ಶ್ರೀಧರ ಬಡಿಗೇರ ಅವರ ನಾಣ್ಯ ತುಲಾಭಾರ ಹಾಗೂ ತೆಂಗಿನಕಾಯಿ ತುಲಾಭಾರದ ಭಕ್ತಿಸೇವೆಯ ಹಮ್ಮಿಣಿಯನ್ನು ಶರಣರಿಗೆ ಸಮರ್ಪಿಸಿದರು.
ಸವಡಿಯ ಕಾಳಿಕಾ ಭಜನಾ ಸಂಘದವರು ಭಜನಾ ಪದಗಳನ್ನು ಪ್ರಸ್ತುತ ಪಡಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಎಸ್.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್.ಪುರಾಣಿಕಮಠ ಸ್ವಾಗತಿಸಿದರು. ಪ್ರಕಾಶ ಬರದೂರ, ಶಿವಲಿಂಗಶಾಸ್ತ್ರೀ ಸಿದ್ದಾಪೂರ ನಿರೂಪಿಸಿದರು. ಬಿ.ವೈ.ಡೊಳ್ಳಿನ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.