
ಗದಗ: ‘ಆಹಾರ ಪದ್ಧತಿ ಮನುಷ್ಯನ ಆರೋಗ್ಯದ ಮೂಲವಾಗಿದ್ದು, ಪೌಷ್ಟಿಕತೆ, ಸಮತೋಲಿತ ಆಹಾರ ಹಾಗೂ ಸ್ಥಳೀಯ ಆಹಾರ ಪದ್ಧತಿಗಳ ಅಳವಡಿಕೆಯಿಂದಲೇ ಸುಸ್ಥಿರ ಆರೋಗ್ಯ ಸಾಧಿಸಬಹುದು’ ಎಂದು ಜಾಗತಿಕ ಭಾರತೀಯ ವಿಜ್ಞಾನಿಗಳು ಮತ್ತು ತಂತ್ರಜ್ಞರ ವೇದಿಕೆಯ ಸಂಯೋಜಕ ಡಾ. ಯಲ್ಲೋಜಿ ರಾವ್ ಮೀರಜ್ಕರ್ ಹೇಳಿದರು.
ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ವಿಶ್ವವಿದ್ಯಾಲಯ, ಜಾಗತಿಕ ಭಾರತೀಯ ವಿಜ್ಞಾನಿಗಳು ಮತ್ತು ತಂತ್ರಜ್ಞರ ವೇದಿಕೆ (ಜಿಐಎಸ್ಟಿ) ಹಾಗೂ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ‘ಸುಸ್ಥಿರ ಆರೋಗ್ಯ ಮತ್ತು ಸ್ವಾಸ್ಥ್ಯದ ಕಡೆಗೆ ಆಹಾರ ಕ್ರಾಂತಿ’ ವಿಷಯ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ವಿಜ್ಞಾನ, ತಂತ್ರಜ್ಞಾನ ಮತ್ತು ಸಮಾಜದ ನಡುವಿನ ಸಂಪರ್ಕವನ್ನು ಬಲಪಡಿಸುವಲ್ಲಿ ಇಂತಹ ವೇದಿಕೆಗಳ ಪಾತ್ರ ಮಹತ್ವದ್ದಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಕುಲಪತಿ ಪ್ರೊ. ಸುರೇಶ್ ವಿ. ನಾಡಗೌಡ ಮಾತನಾಡಿ, ‘ಆಹಾರ ಭದ್ರತೆ, ಸಾರ್ವಜನಿಕ ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಪರಸ್ಪರ ಅವಿಭಾಜ್ಯವಾಗಿದ್ದು, ಇಂತಹ ಶೈಕ್ಷಣಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿಯೂ ಸಮಾಜದಲ್ಲಿಯೂ ಜಾಗೃತಿ ಮೂಡಿಸುತ್ತವೆ’ ಎಂದು ಹೇಳಿದರು.
ಜಿಸ್ಟ್ನ ಕಾರ್ಯದರ್ಶಿ ನಂದಕುಮಾರ್ ಪಾಲ್ಕರ್, ಅನುಷಾ ಅವರು ಆಹಾರ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತು ತಮ್ಮ ಆಲೋಚನೆಗಳನ್ನು ಮಂಡಿಸಿದರು.
ಡಾ. ಅಬ್ದುಲ್ ಅಜಿಜ್ ಮುಲ್ಲಾ, ಡಾ. ಸಾವಿತ್ರಿ ಬ್ಯಾಡಗಿ, ಎಂ.ಎಸ್ಸಿ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಯೋಜಕಿ ಪ್ರೊ. ದೀಪಾ ಎಸ್. ಪಾಟೀಲ, ಸಮಾಜಕಾರ್ಯ ಸಂಯೋಜಕ ಸೋಮಲಿಂಗ ಕರ್ಣಿ, ಸಾರ್ವಜನಿಕ ಆರೋಗ್ಯ ವಿಭಾಗದ ಸಂಯೋಜಕಿ ಪ್ರೊ. ಅರ್ಚನಾ ಎನ್.ಎಲ್., ಬಿ.ಪಿ.ಎಚ್. ಸಂಯೋಜಕಿ ಸ್ನೇಹಾ ಲಾಹೋರ್ಕರ್, ಅಧ್ಯಾಪಕರು, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಡಿಜಿಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು ಭಾಗವಹಿಸಿದ್ದರು.
ಡಾ. ಗಿರೀಶ್ ದೀಕ್ಷಿತ್ ಸ್ವಾಗತಿಸಿದರು. ಸೋಮಲಿಂಗ ಕರ್ಣಿ ವಂದಿಸಿದರು. ರಾಫಿಯಾ ರಾಯಭಾಗ್ ನಿರೂಪಿಸಿದರು.
ಆಯುರ್ವೇದ ಮತ್ತು ಆಧುನಿಕ ಆಹಾರ ವಿಜ್ಞಾನಗಳ ಸಂಯೋಜನೆಯಿಂದ ಸಮಗ್ರ ಆರೋಗ್ಯ ಸಾಧನೆ ಸಾಧ್ಯ
–ಡಾ. ಸಂತೋಷ್ ನೀಲಪ್ಪ ಬೆಳವಡಿ ಪ್ರಾಂಶುಪಾಲ ಡಿಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.