ನರಗುಂದ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರೇರಣೆಯಿಂದ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಅಲ್ಲಿನ ಸರ್ಕಾರಗಳು ಜಾರಿ ಮಾಡುತ್ತಿವೆ. ನಮ್ಮ ಗ್ಯಾರಂಟಿ ಯೋಜನೆಗಳ ಸ್ಥಿರತೆಗೆ ಇದು ಸಾಕ್ಷಿ. ಇದರಿಂದ ಯುವಕರು, ಮಹಿಳೆಯರು ಆರ್ಥಿಕ ಸಬಲತೆ ಹೊಂದಿದ್ದಾರೆ ಎಂದು ಗ್ಯಾರಂಟಿ ಯೋಜನೆ ತಾಲ್ಲೂಕು ಅಧ್ಯಕ್ಷ ವಿವೇಕ ಯಾವಗಲ್ ಹೇಳಿದರು.
ತಾಲ್ಲೂಕಿನ ಚಿಕ್ಕನರಗುಂದದ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ತಾಲ್ಲೂಕು ಗ್ಯಾರಂಟಿ ಯೋಜನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಗ್ಯಾರಂಟಿ ಯೋಜನೆಗಳು ಸಾರ್ವಜನಿಕ ಜೀವನದ ಸಾಮಾಜಿಕ ಚೇತನಶಕ್ತಿಯಾಗಿ ರೂಪಗೊಂಡು ಯುವಕರ, ಮಹಿಳೆಯರ ಆರ್ಥಿಕತೆಗೆ ಸ್ಥಿರತೆಯನ್ನು ತಂದಿವೆ. ನಮ್ಮ ರಾಜ್ಯದ ಜನರ ಜೀವನಮಟ್ಟ ಸುಧಾರಣೆಗೆ ನಾಂದಿ ಹಾಡಿವೆ ಎಂದರು. ಇವುಗಳ ಸದುಪಯೋಗಕ್ಕೆ ಮುಂದಾಗುವಂತೆಯೂ ಸಲಹೆ ಮಾಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ ಇನಾಮದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರಿಗೆ ಇಲಾಖೆ ಅಧಿಕಾರಿಗಳು, ಆಹಾರ ನಿರೀಕ್ಷಕರು, ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿಗಳು, ಹೆಸ್ಕಾಂ ಇಲಾಖೆ ಅಧಿಕಾರಿಗಳು ಗ್ಯಾರಂಟಿ ಯೋಜನಾ ಪ್ರಗತಿ ವಿವರ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಲ್ಲವ್ವ ಮರೆಣ್ಣನವರ ಹಾಗೂ ಸಮಿತಿಯ ಸದಸ್ಯರಾದ ದ್ಯಾಮಣ್ಣ ಕಾಡಪ್ಪನವರ, ತಮ್ಮನಗೌಡ ಶಿರಿಯಪ್ಪಗೌಡ್ರ, ವೀರೇಶ ಚಳುಕಿ, ವಿನಾಯಕ ಹಡಗಲಿ, ಉಮಾ ದ್ಯಾವನೂರ, ಚಂದ್ರಶೇಖರ ಪಾಟೀಲ, ಶೇಖರಗೌಡ ಮದ್ನೂರ, ಬಸವರಾಜ ಹೊಂಗಲ, ದೇವರಾಜ ನಾಗನೂರ, ಮೌಲಾಸಾಬ ಅರಬಜಮಾದಾರ, ಹನಮಂತ ರಾಮಣ್ಣವರ, ಚಂದ್ರಶೇಖರಗೌಡ ಪಾಟೀಲ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇದ್ದರು. ಪ್ರದೀಪ ಕದಂ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.