ಲಕ್ಷ್ಮೇಶ್ವರ (ಗದಗ ಜಿಲ್ಲೆ): ಹೋಳಿ ಹಬ್ಬದ ಪ್ರಯುಕ್ತ ತಾಲ್ಲೂಕಿನ ಸುವರ್ಣಗಿರಿ ತಾಂಡಾದಲ್ಲಿ ಶುಕ್ರವಾರ ಯುವಕರ ಗುಂಪೊಂದು ರಾಸಾಯನಿಕ ಬಣ್ಣ ಎರಚಿದ ಪರಿಣಾಮ ನಾಲ್ವರು ಬಾಲಕಿಯರು ಅಸ್ವಸ್ಥಗೊಂಡಿದ್ದಾರೆ.
ಲಕ್ಷ್ಮೇಶ್ವರದ ಪುರಸಭೆ ಉಮಾ ವಿದ್ಯಾಲಯ ಪ್ರೌಢಶಾಲೆಗೆ ಹೋಗಲು ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಬಸ್ಗಾಗಿ ಕಾಯುತ್ತಿದ್ದರು. ಆಗ ಬಣ್ಣ ಎರಚಲು ಬಂದ ಯುವಕರಿಗೆ, ‘ಪರೀಕ್ಷೆ ಇದೆ. ಬಣ್ಣ ಹಾಕಬೇಡಿ’ ಎಂದು ವಿದ್ಯಾರ್ಥಿನಿಯರು ಕೋರಿದರು. ಆದರೂ ಅದಕ್ಕೆ ಒಪ್ಪದ ಯುವಕರು ವಿದ್ಯಾರ್ಥಿನಿಯರ ಮೇಲೆ ಮೇಲೆ ಸಗಣಿ, ಮಣ್ಣು, ಮೊಟ್ಟೆ, ಗೊಬ್ಬರ ಇನ್ನೂ ಕೆಲ ರಾಸಾಯನಿಕ ಮಿಶ್ರಣ ಮಾಡಿದ ಬಣ್ಣವನ್ನು ಎರಚಿದರು. ಬಸ್ ಒಳಗೂ ಬಣ್ಣ ಎರಚಿದರು.
ಶಾಲೆ ಬಳಿ ಬರುತ್ತಿದ್ದಂತೆಯೇ ವಿದ್ಯಾರ್ಥಿನಿಯರಾದ ಅಂಕಿತಾ ಲಮಾಣಿ, ತನುಷಾ ಲಮಾಣಿ, ಗೌರಿ ಪೂಜಾರ ಮತ್ತು ದಿವ್ಯಾ ಲಮಾಣಿ ವಾಂತಿ ಮಾಡಿಕೊಂಡು, ಅಸ್ವಸ್ಥಗೊಂಡರು. ಅವರನ್ನು ತಕ್ಷಣವೇ ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ಕೊಡಿಸಲಾಯಿತು.
‘ನಾಲ್ವರು ವಿದ್ಯಾರ್ಥಿನಿಯರಲ್ಲಿ ತೀವ್ರ ಎದೆನೋವು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿ, ಜಿಮ್ಸ್ಗೆ ಕಳಿಸಲಾಯಿತು’ ಎಂದು ಪುರಸಭೆ ಉಮಾ ವಿದ್ಯಾಲಯ ಮುಖ್ಯ ಶಿಕ್ಷಕ ಎಸ್.ಎಚ್. ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.