ಗದಗ: ಪಂಜಾಬ್ ರಾಜ್ಯದ ಜಲಂಧರ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆ ಮೃತಪಟ್ಟಿದ್ದ ತಾಲ್ಲೂಕಿನ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವನ್ನು ಗುರುವಾರ ಹಿರೇಕೊಪ್ಪ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಭಾರತೀಯ ಸೇನೆಯಲ್ಲಿ ಯೋಧನಾಗಿ 13 ಷರ್ವಗಳಿಂದ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ ಅವರು ಜಲಂಧರ್ನ ಸೇನಾ ವಸತಿಗೃಹದಲ್ಲಿ ಕುಟುಂಬಸಹಿತ ವಾಸವಾಗಿದ್ದರು. ಮಂಜುನಾಥನ ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಕಳೆದ ಶುಕ್ರವಾರ ವಿದ್ಯುತ್ ಅವಘಡ ಸಂಭವಿಸಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ನಿಧನರಾಗಿದ್ದರು. ಗುರುವಾರ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ತರಲಾಯಿತು. ಪಾರ್ಥೀವ ಶರೀರ ಕಂಡು ಗ್ರಾಮಸ್ಥರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ಯೋಧನಿಗೆ ಪತ್ನಿ, ಐದು ವರ್ಷದ ಪುತ್ರ, ತಂದೆ ಮತ್ತು ತಾಯಿ ಇದ್ದಾರೆ.
ನರಗುಂದ ಶಾಸಕ ಸಿ.ಸಿ. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.