ನರಗುಂದ: ಕಳಸಾಬಂಡೂರಿ ಅನುಷ್ಠಾನಕ್ಕೆ ಮೊದಲು ಪ್ರಯತ್ನ ಆರಂಭಿಸಿದ್ದು ನಮ್ಮ ಪಕ್ಷದ ಎಚ್.ಕೆ.ಪಾಟೀಲರು. ಆಗ ಬಿಜೆಪಿ ಸರ್ಕಾರಗಳೇ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ನಂತರ ನ್ಯಾಯಮಂಡಳಿ ರಚನೆಯಾಗಿ ನೀರು ಹಂಚಿಕೆ ಮಾಡಿತು. ಹಂಚಿಕೆ ಮಾಡಿ ಐದು ವರ್ಷವಾದರೂ ಇದರ ಬಳಕೆಗೆ ರಾಜ್ಯ ಸರ್ಕಾರ ಮುಂದಾಗಿಲ್ಲ. ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಡಿಪಿಆರ್ ನೀಡಲು ಐದು ವರ್ಷ ತೆಗೆದುಕೊಂಡಿತು. ಇದು ಚುನಾವಣೆ ಗಿಮಿಕ್ ಆಗಿದೆ ಎಂದು ಮಾಜಿ ಸಚಿವ ಬಿ.ಆರ್.ಯಾವಗಲ್ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿಂದಿನ ಅವಧಿಯಲ್ಲಿ ನಮ್ಮ ಸರ್ಕಾರದ ನೇತೃತ್ವದಲ್ಲಿ ಪ್ರಧಾನಿ ಮೋದಿಯವರ ಬಳಿ ಹೋದಾಗ ಅವರು ಸ್ಪಂದನೆ ನೀಡಲಿಲ್ಲ. ಈಗ ಮತ್ತೆ ಕಳಸಾಬಂಡೂರಿ ಯೋಜನೆ ಕುರಿತು ಮಾತನಾಡುತ್ತಿದ್ದು ಜನರನ್ನು ದಾರಿತಪ್ಪಿಸುವ ಕೆಲಸವಾಗಿದೆ ಎಂದರು.
‘ಈಚೆಗೆ ನಮ್ಮ ಪಕ್ಷದ ಪ್ರಜಾಧ್ವನಿ ಯಾತ್ರೆಯಲ್ಲಿ ಈ ಕ್ಷೇತ್ರದ ರಸ್ತೆಗಳ ದುಃಸ್ಥಿತಿ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಧ್ವನಿ ಎತ್ತಿದ್ದನ್ನು ನಾನೇ ಅವರಿಂದ ಹೇಳಿಸಿದ್ದೇನೆ ಎನ್ನುತ್ತಿರುವ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲರ ಮಾತು ಎಷ್ಟು ಸರಿ’ ಎಂದು ಯಾವಗಲ್ ಪ್ರಶ್ನಿಸಿದರು.
ಸಿದ್ಧರಾಮಯ್ಯನವರು ಎಲ್ಲೋ ಒಂದು ಕಡೆ ನಿಮ್ಮನ್ನು ಹೊಗಳಿರಬಹುದು. ಅಷ್ಟಕ್ಕೆ ಆಣೆ ಪ್ರಮಾಣಕ್ಕೆ ಇಳಿಯೋದು ಸರಿಯೇ? ಮತಕ್ಷೇತ್ರದ ಜನತೆ ಚುನಾಯಿಸಿ ಕಳಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡಬೇಕು’ ಎಂದು ಹರಿಹಾಯ್ದರು.
ಪಟ್ಟಣದಲ್ಲಿ ಹುಬ್ಬಳ್ಳಿ ಸೊಲ್ಲಾಪುರ ಹೆದ್ದಾರಿ ತಪ್ಪಿಸುವ ಸಲುವಾಗಿ ನಮ್ಮ ಅಧಿಕಾರಾವಧಿಯಲ್ಲಿ ಅಂದಾಜು ₹80 ಕೋಟಿಯಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ನೀಲನಕ್ಷೆ ಸಿದ್ದವಾಗಿತ್ತು. ಅದನ್ನೇ ಮುಂದುವರಿಸದೇ ಹೊಸದಾಗಿ ₹126 ಕೋಟಿ ಬಿಡುಗಡೆ ಮಾಡಿ ಬೈಪಾಸ್ ರಸ್ತೆ ನಿರ್ಮಿಸಲು ಮುಂದಾಗಿದ್ದು ಯಾರ ಅನುಕೂಲಕ್ಕೆ ಎಂದು ಕೇಳಿದರು.
ವಿಠ್ಠಲ ಶಿಂಧೆ, ರಾಜು ಕಲಾಲ, ಪುರಸಭೆ ಪುರಸಭೆ ಸದಸ್ಯ ಯಲ್ಲಪ್ಪಗೌಡ ನಾಯ್ಕರ, ಎಂ.ಬಿ.ಅರಹುಣಶಿ, ಗುರುಪಾದಪ್ಪ ಕುರಹಟ್ಟಿ,
ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪ್ರವೀಣ ಯಾವಗಲ್ಲ, ಬಿಎನ್.ಮಾನೆ, ಶಿವನಗೌಡ ಹೆಬ್ಬಳ್ಳಿ, ಉದಯ ಮುಧೋಳೆ, ರಾಮಕೃಷ್ಣ ಗೊಂಬಿ, ವಾಸು ಹೆಬ್ಬಾಳ, ಪ್ರಕಾಶ ಹಡಗಲಿ ಬಸನಗೌಡ ಹೆಬ್ಬಳ್ಳಿ, ರವಿ ಯರಗಟ್ಟಿ, ವಿಷ್ಣು ಸಾಠೆ ಇದ್ದರು.
ನಾಲ್ಕೂವರೆ ವರ್ಷಗಳ ಕಾಲ ಸುಮ್ಮನಿದ್ದು ಆರು ತಿಂಗಳಲ್ಲಿ ಅಭಿವೃದ್ಧಿಗೆ ಮುಂದಾಗಿದ್ದು ಎಷ್ಟು ಸರಿ? ರಸ್ತೆಗಳ ಅಭಿವೃದ್ಧಿ ಒಂದು ಬಿಟ್ಟರೆ ಉಳಿದ ಅಭಿವೃದ್ಧಿ ಕೆಲಸಗಳು ಎಲ್ಲಿ ಆಗಿವೆ?
ಬಿ.ಆರ್.ಯಾವಗಲ್, ಮಾಜಿ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.