ADVERTISEMENT

ಜೈವಿಕ ಇಂಧನ ನೀತಿ ಶೀಘ್ರ ಘೋಷಣೆ: ಎಸ್.ಈ. ಸುಧೀಂದ್ರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 4:43 IST
Last Updated 21 ಆಗಸ್ಟ್ 2025, 4:43 IST
ಎಸ್.ಈ. ಸುಧೀಂದ್ರ
ಎಸ್.ಈ. ಸುಧೀಂದ್ರ   

ಗದಗ: ‘ಜೈವಿಕ ಇಂಧನ ನೀತಿಯನ್ನು ರಾಜ್ಯ ಸರ್ಕಾರ ಶೀಘ್ರವೇ ಘೋಷಿಸಲಿದ್ದು, ಅನುಷ್ಠಾನ ಪ್ರಕ್ರಿಯೆಗೆ ಮಾರ್ಗಸೂಚಿ ಸಿದ್ಧಗೊಳಿಸಲಾಗಿದೆ’ ಎಂದು ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ತಿಳಿಸಿದರು.

ಇಲ್ಲಿನ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸದ್ಭಾವನಾ ದಿವಸ, ಊರ್ಜಾ ದಿವಸ್, ವಿಶ್ವ ಜೈವಿಕ ಇಂಧನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಜೈವಿಕ ಇಂಧನ ಕ್ಷೇತ್ರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆಯ ನಿರೀಕ್ಷೆಯಿದೆ. ಮೂರು ಲಕ್ಷಕ್ಕೂ ಹೆಚ್ಚಿನ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಜನೆ, ರೈತರ ಕುಟುಂಬಗಳ ಆದಾಯದ ಹೆಚ್ಚಳ, ಯುವ ಉದ್ದಿಮೆದಾರರಿಗೆ ಪ್ರೋತ್ಸಾಹ ಸಿಗಲಿದೆ’ ಎಂದರು.

ADVERTISEMENT

‘ಸೌರಶಕ್ತಿ, ಪವನ ಶಕ್ತಿ ಕ್ಷೇತ್ರದಲ್ಲಿ ರಾಜ್ಯವು ಉತ್ತಮ ಸಾಧನೆ ಮಾಡಲು ಸರ್ಕಾರ ಹಲವು ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಪ್ರಸ್ತುತ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೂ ಸರ್ಕಾರ ಆಸಕ್ತಿ ತೋರಿದೆ. ನೂತನ ಜೈವಿಕ ಇಂಧನ ನೀತಿಯು ಈ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡಲಿದೆ’ ಎಂದರು.

‘ಪ್ರಸ್ತುತ ಸನ್ನಿವೇಶದಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಮತ್ತು ವಾಣಿಜ್ಯೀಕರಣ ಅತ್ಯಗತ್ಯವಾಗಿದ್ದು, ಬೇರೆ ರಾಜ್ಯಗಳು ಜೈವಿಕ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಮಂಡಳಿ ಸಹ ಈ ದಿಶೆಯಲ್ಲಿ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲಿದೆ’ ಎಂದರು.

‘ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮಾರ್ಗದರ್ಶನದಲ್ಲಿ ನೂತನ ಜೈವಿಕ ಇಂಧನ ನೀತಿಯು ರಾಜ್ಯದ ಜೈವಿಕ ಇಂಧನ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲಿದ್ದು, ಬಂಡವಾಳ ಹೂಡಿಕೆದಾರರಿಗೆ ಪೂರಕ ವಾತಾವರಣ ಕಟ್ಟಿಕೊಡಲಿದೆ’ ಎಂದರು.

ಗದಗ ಡಿಸಿಎಫ್‌ ಸಂತೋಷ್‌ ಕುಮಾರ್‌ ಮಾತನಾಡಿ, ‘ಈ ಮೊದಲು ಗಿಡಮರಗಳಿಂದ ಉತ್ಪಾದನೆಯಾಗುವ ಜೈವಿಕ ಇಂಧನಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಇತ್ತೀಚಿಗೆ ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಹೆಚ್ಚಾಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಂದ ಜೈವಿಕ ಇಂಧನ ಅಧಿಕ ಉತ್ಪಾದನೆ ಆಗುತ್ತಿರುವುದು ಇಂಧನ ವಲಯಕ್ಕೆ ಶಕ್ತಿ ತುಂಬಿದೆ. ಜೈವಿಕ ಇಂಧನದಿಂದ ವಿದೇಶದಿಂದ ಇಂಧನ ಆಮದು ಕಡಿಮೆ ಆಗಲಿದೆ. ದೇಶದಲ್ಲಿ ಹಸರೀಕರಣ ಹೆಚ್ಚಾಗಲಿದೆ’ ಎಂದರು.

‘ಯುವಜನರು ಉದ್ಯಮಶೀಲತೆ ಬೆಳಸಿಕೊಂಡು ಇತರರಿಗೆ ಉದ್ಯೋಗ ನೀಡಬೇಕು. ನಮ್ಮನ್ನು ವಿಭಜಿಸುವ ಶಕ್ತಿಗಳ ಬಗ್ಗೆ ಎಚ್ಚರ ಇರಬೇಕು. ವಿಭಜಿಸುವ ಶಕ್ತಿಯನ್ನು ನಾಶ ಮಾಡಿ ಸಾಧನೆಗೆ ಗಮನ ಕೊಡಬೇಕು. ಆಗ ಮಾತ್ರ ಸದ್ಭಾವನಾ ದಿವಸ ಆಚರಣೆ ಸಾರ್ಥಕವಾಗುತ್ತದೆ’ ಎಂದರು.

ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಸುರೇಶ ವಿ. ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು.

ಹಣಕಾಸು ಅಧಿಕಾರಿ ಪ್ರಶಾಂತ್‌ ಜೆ.ಸಿ., ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕ ಡಾ. ರವಿ ಜಡೆ, ಸಹಾಯಕ ನಿರ್ದೇಶಕ ಗಿರೀಶ್‌ ದಿಕ್ಷಿತ್‌, ವಿದ್ಯಾರ್ಥಿಗಳು ಇದ್ದರು.

ವಿದ್ಯಾರ್ಥಿಗಳು ಬಲಿಷ್ಠ ರಾಷ್ಟ್ರದ ಭಾಗ: ಶಿವಶಂಕರ

‘ಮುಂದಿನ 30 ವರ್ಷಗಳಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಲಿದ್ದು, ಇಂದಿನ ವಿದ್ಯಾರ್ಥಿಗಳು ಬಲಿಷ್ಠ ರಾಷ್ಟ್ರದ ಭಾಗ ಆಗಲಿದ್ದಾರೆ’ ಎಂದು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌ ಹೇಳಿದರು.

‘ಹಾಗಾಗಿ ವಿದ್ಯಾರ್ಥಿಗಳು ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಒತ್ತು ನೀಡಬೇಕು. ಬದುಕಿಗೆ ಆಹಾರ, ವಸತಿ, ಶಿಕ್ಷಣ ಎಷ್ಟು ಮುಖ್ಯವೋ ಶಕ್ತಿಯೂ ಅಷ್ಟೇ ಮುಖ್ಯ. ಇಂಧನ ಶಕ್ತಿ ಇಂದು ಅಗತ್ಯತೆಗಳಲ್ಲಿ ಒಂದಾಗಿದೆ. ಜೈವಿಕ ಪುನರ್ಬಳಕೆ ಇಂಧನವು ಭವಿಷ್ಯದ ಶಕ್ತಿಯಾಗಲಿದೆ’ ಎಂದು ಹೇಳಿದರು.

ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೆ ರಾಜೀವ್‌ ಪ್ರೇರಣೆ: ಸುಧೀಂದ್ರ

‘ನವೀಕರಿಸಬಹುದಾದ ಸಂಪನ್ಮೂಲಗಳ ಕುರಿತಾಗಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಅಂದಿನ ಚಿಂತನೆ, ದೂರದೃಷ್ಟಿತ್ವ ಇಂದಿಗೂ ಜೈವಿಕ ಇಂಧನ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರೇರಣೆಯಾಗಿದೆ’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್‌.ಈ. ಸುಧೀಂದ್ರ ತಿಳಿಸಿದರು.

‘ದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಹಾಗೂ ಜೀವವಿಜ್ಞಾನಕ್ಕೆ ಮುನ್ನುಡಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ನೆನಪಿನಲ್ಲಿ ಸದ್ಭಾವನಾ ದಿನ ಆಚರಿಸಲಾಗುತ್ತದೆ. ನವೀಕರಿಸಬಹುದಾದ ಸಂಪನ್ಮೂಲಗಳ ಕುರಿತಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದೇ ರಾಜೀವ್ ಗಾಂಧಿ ಅಕ್ಷಯ್ ಊರ್ಜಾ ದಿವಸ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ’ ಎಂದರು.

ದೇಶದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ನಡೆದಿದೆ. ಈಗ ಜೈವಿಕ ಕ್ರಾಂತಿ ನಡೆದಿರುವುದು ದೇಶದ ಅಭಿವೃದ್ಧಿಗೆ ಪೂರಕ ಆಗಲಿದೆ
ಸಂತೋಷ್‌ ಕುಮಾರ್‌ಡಿಸಿಎಫ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.