ADVERTISEMENT

ಗದಗ: ಉತ್ಖನನವೆಂದರೆ ನಿಧಿ ಶೋಧವಲ್ಲ; ಪರಂಪರೆ ಹುಡುಕಾಟ

ಐದು ದೇಗುಲ, ಬಾವಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಚಿವ ಎಚ್‌.ಕೆ.ಪಾಟೀಲ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:35 IST
Last Updated 7 ಫೆಬ್ರುವರಿ 2026, 4:35 IST
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಚಿವ ಎಚ್‌.ಕೆ.ಪಾಟೀಲ ಅವರು ಉತ್ಖನನದಲ್ಲಿ ದೊರೆತ ಪ್ರಾಚ್ಯ ಅವಶೇಷಗಳನ್ನು ವೀಕ್ಷಿಸಿದರು. 
ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ್ದ ಸಚಿವ ಎಚ್‌.ಕೆ.ಪಾಟೀಲ ಅವರು ಉತ್ಖನನದಲ್ಲಿ ದೊರೆತ ಪ್ರಾಚ್ಯ ಅವಶೇಷಗಳನ್ನು ವೀಕ್ಷಿಸಿದರು.    

ಗದಗ: ‘ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಈಗ ನಡೆದಿರುವುದು ಚಿನ್ನದ ನಿಧಿ ಶೋಧವಲ್ಲ. ಚಿನ್ನಕ್ಕಿಂತ ಬೆಲೆಬಾಳುವ ಇತಿಹಾಸ, ಪರಂಪರೆ ತಿಳಿಸುವ ಪ್ರಾಚ್ಯ ಅವಶೇಷಗಳ ಹುಡುಕಾಟಕ್ಕಾಗಿ ಉತ್ಖನನ ಕೈಗೊಳ್ಳಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಪುರಾತತ್ವ ಇಲಾಖೆ ಸಹಯೋಗದಲ್ಲಿ ಲಕ್ಕುಂಡಿ ಗ್ರಾಮದ ಪಂಚ ದೇವಾಲಯಗಳು ಹಾಗೂ ಬಾವಿಗಳ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಲಕ್ಕುಂಡಿ ಐತಿಹಾಸಿಕವಾಗಿ ಶ್ರೀಮಂತ ಗ್ರಾಮ. ಕೈ ಹಾಕಿದ ಕಡೆಗಳಲ್ಲೆಲ್ಲಾ ಲಕ್ಕುಂಡಿಯ ಗತ ವೈಭವ ಸೂಚಿಸುವ ಪ್ರಾಚ್ಯ ಅವಶೇಷಗಳು ದೊರೆಯುತ್ತವೆ. ಅಂತಹ ಸತ್ವಯುತ ಕಲೆ, ಪರಂಪರೆ ಇಲ್ಲಿದೆ. ಇಷ್ಟು ಶ್ರೀಮಂತಿಕೆ ಇರುವುದರಿಂದಲೇ ಇಲ್ಲಿಗೆ ವಿದೇಶಿ ಪ್ರವಾಸಿಗರು, ಸಂಶೋಧಕರು ಭೇಟಿ ಕೊಡುತ್ತಾರೆ’ ಎಂದರು.

ADVERTISEMENT

‘ವಿವಿಧ ಕಾರಣಗಳಿಂದ ಮುಚ್ಚಿ ಹೋಗಿದ್ದ ಐದು ದೇವಸ್ಥಾನ ಮತ್ತು ಐದು ಬಾವಿಗಳನ್ನು ಗುರುತಿಸಿ, ಸ್ವಚ್ಛಗೊಳಿಗೆ ಅವುಗಳನ್ನು ಜನರ ಕಣ್ಣಿಗೆ ಗೋಚರವಾಗುವಂತೆ ಮಾಡುವ ಕೆಲಸಕ್ಕೆ ಈಗ ಚಾಲನೆ ನೀಡಲಾಗಿದೆ. ಇದು ಲಕ್ಕುಂಡಿಯ ಇತಿಹಾಸ ಅನಾವರಣ ಕಾರ್ಯವೂ ಆಗಿದೆ’ ಎಂದರು.

‘ಲಕ್ಕುಂಡಿ ಗ್ರಾಮದಲ್ಲಿ 101 ದೇಗುಲ, 101 ಬಾವಿಗಳಿದ್ದವು ಎಂಬ ಉಲ್ಲೇಖ ಇದೆ. ಅವುಗಳನ್ನು ಹುಡುಕಿ, ತೆಗೆಯುವ ಗುರಿ ಹೊಂದಲಾಗಿದೆ. ಅದರ ಜತೆಗೆ ಸ್ಥಳೀಯರು ಇಲ್ಲಿ 63 ಮಠಗಳಿದ್ದವು ಎಂದು ಹೇಳಿದ್ದಾರೆ. ಈ ಬಗ್ಗೆಯೂ ಸಂಶೋಧನೆ ನಡೆಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಮಾರ್ಚ್‌ 30ರ ಒಳಗಾಗಿ ಈ 10 ಸ್ಥಳಗಳನ್ನು ಅನಾವರಣಗೊಳಿಸಲಾಗುವುದು. ಅದರಲ್ಲಿ ಕೆಲವನ್ನು ದುರಸ್ತಿ ಮಾಡಬೇಕಿದೆ. ಅದನ್ನು ಸರಿಪಡಿಸಿದ ಬಳಿಕ ಜೀರ್ಣೋದ್ಧಾರಕ್ಕೆ ಕ್ರಮವಹಿಸಲಾಗುವುದು. ಈಗ ನಡೆದಿರುವ ದೇಗುಲ, ಬಾವಿಗಳ ಅನಾವರಣ ಕಾರ್ಯ ಪೂರ್ಣಗೊಂಡ ಬಳಿಕ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಲು ಕ್ರಮವಹಿಸಲಾಗುವುದು’ ಎಂದರು.

‘ಪ್ರಾಚ್ಯ ಅವಶೇಷಗಳ ಸಂಗ್ರಹ ಅಭಿಯಾನ ನಡೆದಾಗ ಲಕ್ಕುಂಡಿ ಜನರು ಮುಕ್ತ ಮನಸ್ಸಿನಿಂದ ತಮ್ಮ ಬಳಿಯಿಂದ ಅಮೂಲ್ಯ ವಸ್ತುಗಳನ್ನು ಕೊಟ್ಟರು. ಅದೇ ಸಹಕಾರ ಮುಂದುವರಿಸುವ ಹೃದಯ ವೈಶಾಲ್ಯ ಅವರಿಗೆ ಇದೆ’ ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ‘ಮುಂಬರುವ ದಿನಗಳಲ್ಲಿ ಲಕ್ಕುಂಡಿ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ, ಮಾಸ್ಟರ್‌ ಪ್ಲ್ಯಾನ್‌ ತಯಾರಿಸಲಾಗುವುದು. ಅದರ ಜತೆಗೆ ಹಂತ ಹಂತವಾಗಿ 101 ಗುಡಿ, 101 ಬಾವಿಗಳನ್ನು ಗುರುತಿಸಿ, ಅನಾವರಣಗೊಳಿಸಲು ಕ್ರಮವಹಿಸಲಾಗುವುದು’ ಎಂದರು.

‘ಬಯಲು ವಸ್ತು ಸಂಗ್ರಹಾಲಯ ಸ್ಥಾಪನೆಗೆ ಸ್ಥಳೀಯರ ಬೆಂಬಲ ಪಡೆಯುವಂತೆ ಸಚಿವರು ಸೂಚಿಸಿದ್ದಾರೆ. ಅವರ ಬಳಿ ಇರುವ ಅಮೂಲ್ಯ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿ, ಸಂರಕ್ಷಣೆ ಮಾಡಲಾಗುವುದು’ ಎಂದರು.

‘ಲಕ್ಕುಂಡಿ ವಿಶ್ವಕ್ಕೆ ಮಾದರಿಯಾಗಿ ಬೆಳೆಯುವ ಅವಕಾಶ ಇದೆ. ಯುನೆಸ್ಕೋ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಸಿಕ್ಕರೆ ಸ್ಥಳೀಯವಾಗಿ ಅಭಿವೃದ್ಧಿ ಆಗಲಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ.ಅಸೂಟಿ, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಮಿತಿ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ, ಇತಿಹಾಸಕಾರ ಅ.ದ.ಕಟ್ಟಿಮನಿ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ, ತೇಜೇಶ್ವರ ಇದ್ದರು.

ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಸ್ವಾಗತಿಸಿದರು.

ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ನಮ್ಮ ಸರ್ಕಾರ ಬಲವಾದ ಇಚ್ಛಾಶಕ್ತಿ ತೋರಿದೆ. ಉತ್ಖನನ ನಡೆಸಲು ಸಂಶೋಧನೆ ಕೈಗೊಳ್ಳಲು ಹಣಕಾಸಿನ ತೊಂದರೆ ಇಲ್ಲ. ಈ ಕಾರ್ಯ ಪೂರ್ಣಗೊಂಡ ಬಳಿಕ ಮತ್ತೇ 10 ದೇಗುಲ 10 ಬಾವಿಗಳನ್ನು ಗುರುತಿಸಿ ಅನಾವರಣ ಮಾಡುವ ಕೆಲಸ ಆರಂಭಿಸಲಾಗುವುದು
ಎಚ್‌.ಕೆ.ಪಾಟೀಲ ಸಚಿವ

ಲಕ್ಕುಂಡಿಗೆ ಹೊಸ ಸ್ವರೂಪ: ಸಿ.ಸಿ.ಪಾಟೀಲ ಶ್ಲಾಘನೆ ‘ಸಚಿವ ಎಚ್‌.ಕೆ.ಪಾಟೀಲ ಅವರು ಲಕ್ಕುಂಡಿಗೆ ಹೊಸ ಸ್ವರೂಪ ನೀಡಲು ಕ್ರಮವಹಿಸಿದ್ದು ಇದಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ’ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು. ‘ಉತ್ಖನನದ ಮೂಲಕ ಅಮೂಲ್ಯ ಪ್ರಾಚ್ಯ ಅವಶೇಷಗಳು ಸಿಗುತ್ತಿವೆ. ಚಿನ್ನದ ನಿಧಿ ಸಿಕ್ಕ ನಂತರ ಲಕ್ಕುಂಡಿ ಖ್ಯಾತಿ ದೇಶಕ್ಕೆ ಗೊತ್ತಾಗಿದೆ. ರಿತ್ತಿ ಕುಟುಂಬದ ಪ್ರಾಮಾಣಿಕತೆಯನ್ನು ಅಭಿನಂದಿಸುವೆ. ಲಕ್ಕುಂಡಿಯನ್ನು ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡಲು ಅವರು ಪ್ರಯತ್ನ ಆರಂಭಿಸಿದ್ದು ನಮ್ಮ ಸಹಕಾರವೂ ಇರಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.