ನರಗುಂದ: ಕಳಸಾ - ಬಂಡೂರಿ ಯೋಜನೆ ಶೀಘ್ರ ಪ್ರಾರಂಭ ಮಾಡದೇ ಹೋದರೆ 1981ರ ಹೋರಾಟ ದಿನಗಳು ಮತ್ತೆ ಮರುಕಳಿಸುತ್ತವೆ. ನೀರಿಗಾಗಿ ಎರಡನೇ ಹಂತದ ಹೋರಾಟಕ್ಕೆ ನಾವೆಲ್ಲರೂ ಸಿದ್ದರಾಗಬೇಕು ಎಂದು ಕಳಸಾ-ಬಂಡೂರಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಪಡಗದ ಹೇಳಿದರು.
ಅವರು 42ನೇ ಹುತಾತ್ಮ ರೈತ ದಿನದ ಅಂಗವಾಗಿ ಗುರುವಾರ ಚಿಕ್ಕನರಗುಂದ ಗ್ರಾಮದ ಹುತಾತ್ಮ ರೈತ ವೀರಪ್ಪ ಬಸಪ್ಪ ಕಡ್ಲಿಕೊಪ್ಪ ರೈತ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.
‘ಎರಡು ವರ್ಷಗಳಿಂದ ಕೋವಿಡ್ ಹೆಸರು ಹೇಳಿ ಕಾಲಹರಣ ಮಾಡಿದ ಸರ್ಕಾರ ಕೂಡಲೇ ರೈತರಿಗೆ ನೀಡಬೇಕಾದ ನೀರಾವರಿ ಸೌಲಭ್ಯ ಜತೆಗೆ ಉತ್ತರ ಕರ್ನಾಟಕ ಭಾಗದ ಕಳಸಾ-ಬಂಡೂರಿ, ಮಹದಾಯಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ‘ಕಳಸಾ-ಬಂಡೂರಿ, ಮಹದಾಯಿ ನೀರಿಗಾಗಿ ಎರಡನೇ ಹಂತದ ಹೋರಾಟದ ಸಂಬಂಧ ಮುಂದಿನ ದಿನಗಳಲ್ಲಿ ರೈತರೊಂದಿಗೆ ಸಭೆ ನಡೆಸಿ ರೂಪುರೇಷೆಗಳನ್ನು ಸಿದ್ಧಪಡಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ಆನಂದ ಗವಳಿ, ರವಿ ಜಂತ್ಲಿ, ಆನಂದ ತೊಂಡಿಹಾಳ, ವಿಜಯ ಕೊಟ್ನಿ, ಸಚಿನ ಶಿರೂರ, ಬಾಪು ಗೌಡ, ಹೀರೆಗೌಡ್ರ, ರುದ್ರಗೌಡ, ರಾಚನ ಗೌಡ್ರ, ಮಲ್ಲಪ್ಪ ಆರೇಗುಂಟಿ, ಗೋವಿಂದ ರೆಡ್ಡಿ, ತಿಮ್ಮ ರೆಡ್ಡಿ, ಅಶೋಕ ಜ್ಞಾನೋಪಂತ, ವಿಠ್ಠಲ ತಿಮ್ಮರೆಡ್ಡಿ, ನಾಗರಾಜ ಹುಲಿ, ಜಡೀಯಪ್ಪಗೌಡ ಚನ್ನಪ್ಪಗೌಡ್ರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.