ADVERTISEMENT

ಮಲಪ್ರಭಾ ಕಾಲುವೆಯಲ್ಲಿ ಕೊಚ್ಚಿ ಹೋದ ಯುವಕರು

ಪತ್ತೆಗೆ ಪೊಲೀಸ್‌, ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಯತ್ನ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:04 IST
Last Updated 24 ನವೆಂಬರ್ 2022, 4:04 IST
ಅರುಣ ಚನ್ನಪ್ಪ ಪಡೆಸೂರ
ಅರುಣ ಚನ್ನಪ್ಪ ಪಡೆಸೂರ   

ನರಗುಂದ: ಪಟ್ಟಣದ ಯುವಕರಿಬ್ಬರು ಮಂಗಳವಾರ ಸವದತ್ತಿ ಮಾರ್ಗದಲ್ಲಿನ ಮಲಪ್ರಭಾ ಮುಖ್ಯ ಕಾಲುವೆಯಲ್ಲಿ (ನರಗುಂದ ಬ್ಲಾಕ್) ಕಾರು ತೊಳೆಯಲು ಹೋದ ಯುವಕರು ಕಾಲುವೆಯಲ್ಲಿ ಕಿಚ್ಚಿಕೊಂಡು ಹೋಗಿದ್ದು, ಬುಧವಾರವಾದರೂ ಪತ್ತೆಯಾಗಿಲ್ಲ.

ಕಾಲುವೆ ಪಾಲಾದ ಯುವಕರು ಪಟ್ಟಣದ ಸಿದ್ದನಬಾವಿ ಓಣಿಯ ಅರುಣ ಚನ್ನಪ್ಪ ಪಡೆಸೂರ (27), ಹಾಲಬಾವಿ ಕೆರೆ ಓಣಿಯ ಹನಮಂತ ನರಸಪ್ಪ ಮಜ್ಜಗಿ (20) ಎಂದು ಗುರುತಿಸಲಾಗಿದೆ.

ಮಂಗಳವಾರ ಸಾಯಂಕಾಲ ಕಾರು ತೊಳೆಯಲು ಕಾಲುವೆಗೆ ಇಳಿದಿದ್ದರು. ನೀರು ರಭಸದಿಂದ ಹರಿಯುತ್ತಿದ್ದರಿಂದ ಕೊಚ್ಚಿಕೊಂಡು ಹೋದರು ಎಂದು ತಿಳಿದು ಬಂದಿದೆ. ತಕ್ಷಣ ಕಾಲುವೆ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರೂ ನೀರು ಕಡಿಮೆ ಮಾಡಲಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ತಾಲ್ಲೂಕಿನ ಜಮೀನುಗಳಿಗೆ ನವಿಲುತೀರ್ಥ ಜಲಾಶಯದಿಂದ ನರಗುಂದ ಶಾಖಾ ಕಾಲುವೆಗೆ 740 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಇಷ್ಟು ಪ್ರಮಾಣದ ನೀರನ್ನು ದಿಢೀರ್‌ನೆ ಕಡಿಮೆಗೊಳಿಸಲು ಸಾಧ್ಯವಿಲ್ಲ. ಜತೆಗೆ ನೀರನ್ನು ಶೂನ್ಯ ಹಂತಕ್ಕೆ ಬುಧವಾರ ಬೆಳಿಗ್ಗೆ ತರಲಾಗಿದೆ ಅದು ಕಡಿಮೆಯಾಗಲು 10 ತಾಸುಗಳಾದರೂ ಬೇಕು’ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಯುವಕರ ಪತ್ತೆಗೆ ಹರಸಾಹಸ: ಕಾಲುವೆಯಲ್ಲಿ ಕೊಚ್ಚಿಕೊಂಡು ಹೋದ ಯುವಕರ ಪತ್ತೆಗೆ ಅಗ್ನಿಶಾಮಕ ದಳ, ವಿವಿಧ ಗ್ರಾಮಗಳ ಈಜುಗಾರರು 24 ಗಂಟೆ ಹುಡುಕಿದರೂ ಹರಸಾಹಸ ಪಟ್ಟರೂ ದೊರೆತಿಲ್ಲ.

ಮುಗಿಲು ಮುಟ್ಟಿದ ಆಕ್ರಂದನ: ಎರಡು ಮನೆಗಳಲ್ಲಿ ನೀರವ ಮೌನ ಆವರಿಸಿದ್ದು ತಾಯಂದಿರ, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಯುವಕ ಹನುಮಂತ ಮಜ್ಜಗಿ ಒಬ್ಬನೆ ಪುತ್ರ, ನೀರು ಪಾಲಾಗಿದ್ದರಿಂದ ತಾಯಿ–ತಂದೆ ರೋಧನೆ ಹೇಳತೀರದಾಗಿದೆ.

ಸಿಪಿಐ ಮಲ್ಲಯ್ಯ ಮಠಪತಿ, ತಹಶೀಲ್ದಾರ್ ಎ.ಡಿ‌.ಅಮರವಾದಗಿ, ನೀರಾವರಿ ಇಲಾಖೆ ಅಧಿಕಾರಿಗಳು, ಪುರಸಭೆ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.