
ಬೆಳವಣಿಕಿ (ರೋಣ): ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಈಚೆಗೆ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
2002-03ನೇ ಸಾಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ 2005-06ನೇ ಸಾಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ರೋಣ ಕ್ಷೇತ್ರದ ಶಿಕ್ಷಣಾಧಿಕಾರಿ ಎ.ಎನ್.ಕಂಬೋಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳ ಜತೆಗೆ ಹೊರಗಿನ ಪ್ರಪಂಚದ ಜ್ಞಾನ, ಹೊಸ ಸಂಸ್ಕೃತಿ, ಅನುಭವ ತಿಳಿಸಿಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ’ ಎಂದರು.
ಸಭೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಡಾ. ಸದಾಶಿವ ಭಿಕ್ಷಾವತಿಮಠ, ಹನಮಂತಪ್ಪ ಕರಿಲೆಕ್ಕನವರ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪ್ರಭುಸ್ವಾಮಿ ಭಿಕ್ಷಾವತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತಗೊಂಡ ಆರ್.ಎನ್.ಜಿಗಳೂರ ಹಾಗೂ 26 ಗುರುಗಳಿಗೆ ಸನ್ಮಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ವಿ.ಎಸ್.ವಾಲಿ ಮಾತನಾಡಿ, ‘ಭಾರತದ ಸಂಸ್ಕೃತಿಯಲ್ಲಿ ತಂದೆ, ತಾಯಿ, ಗುರುಗಳಿಗೆ ಗೌರವ ಸ್ಥಾನವಿದೆ. ತಂದೆ ಕೊಟ್ಟ ಸಂಪತ್ತಿಗಿಂತ ಗುರು ನೀಡಿದ ವಿದ್ಯಾಸಂಪತ್ತಿನಿಂದ ವಿದ್ಯಾರ್ಥಿಗಳ ಜೀವನ ಉತ್ತುಂಗಕ್ಕೆ ಏರುತ್ತದೆ’ ಎಂದರು.
ಗುರುಮಲ್ಲಯ್ಯ ಪುರಾಣಿಕಮಠ ಸಾನ್ನಿಧ್ಯ ವಹಿಸಿದ್ದರು. ಎಸ್.ಜಿ.ದಾನಪ್ಪಗೌಡರ, ವೈ.ಡಿ.ಗಾಣಿಗೇರ, ಗೀತಾ ಶೆಟ್ಟರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನಮಂತಗೌಡ ಹುಲ್ಲೂರ ಭಾಗವಹಿಸಿದ್ದರು.
ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಕರ ವೃಂದ, ಊರಿನ ಮುಖಂಡರು, ಗ್ರಾಮಸ್ಥರು ಭಾಗವಹಿಸಿದ್ದರು. ಆರಟ್ಟಿ ಸ್ವಾಗತಿಸಿದರು. ಡಾ.ಸದಾಶಿವ ಭಿಕ್ಷಾವತಿಮಠ ವಂದಿಸಿದರು. ಪಿ.ಪಿ.ಔದಕ್ಕನವರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.