ADVERTISEMENT

ಮುಂಡರಗಿ | ಕನ್ನಡೇತರ ನಾಮಫಲಕ ತೆರವು: ಕನ್ನಡಪರ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:15 IST
Last Updated 31 ಅಕ್ಟೋಬರ್ 2025, 6:15 IST
ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುಂಡರಗಿ ಪಟ್ಟಣದ ಮಾರುಕಟ್ಟೆಯಲ್ಲಿನ ಕನ್ನಡೇತರ ನಾಮಫಲಕಗಳಿಗೆ ಕಪ್ಪುಬಣ್ಣ ಬಳಿದರು
ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುಂಡರಗಿ ಪಟ್ಟಣದ ಮಾರುಕಟ್ಟೆಯಲ್ಲಿನ ಕನ್ನಡೇತರ ನಾಮಫಲಕಗಳಿಗೆ ಕಪ್ಪುಬಣ್ಣ ಬಳಿದರು   

ಮುಂಡರಗಿ: ಪಟ್ಟಣದ ವಿವಿಧೆಡೆ ಅಳವಡಿಸಿದ್ದ ಕನ್ನಡೇತರ ನಾಮಫಲಕಗಳನ್ನು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ತಾಲ್ಲೂಕು ಆಡಳಿತ, ಪುರಸಭೆ ಹಾಗೂ ಪಟ್ಟಣದ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ತೆರವುಗೊಳಿಸಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌, ಕನ್ನಡ ರಕ್ಷಣಾ ವೇದಿಕೆ, ವಿಶ್ವ ಕನ್ನಡ ರಕ್ಷಣಾ ವೇದಿಕೆ, ನಮ್ಮ ಕನ್ನಡ ರಕ್ಷಣಾ ವೇದಿಕೆ, ಕನ್ನಡ ಕ್ರಾಂತಿ ಸೇನೆ, ತಾಲ್ಲೂಕು ಸಾರ್ವಜನಿಕ ಹೋರಾಟ ವೇದಿಕೆ, ಕಿಸಾನ್‌  ವಿಕಾಸ ಜಾಗೃತಿ ಸಂಘ ಮೊದಲಾದ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಅಂಗಡಿ ಮುಗ್ಗಟ್ಟುಗಳ ಮುಂದೆ ಅಳವಡಿಸಲಾಗಿದ್ದ ಕನ್ನಡೇತರ ನಾಮಫಲಕಗಳಿಗೆ ಕಪ್ಪುಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ಮಾತನಾಡಿ, ‘ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕನ್ನಡ ಭಾಷಾಭಿಮಾನಿಗಳಾಗಿದ್ದು, ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುತ್ತಿರುವುದು ಸ್ವಾಗತಾರ್ಹ’ ಎಂದು ಹರ್ಷವ್ಯಕ್ತಪಡಿಸಿದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ, ಮುಖಂಡರಾದ ಮಂಜುನಾಥ ಮುಧೋಳ, ಚಂದ್ರು ಪುಜಾರ, ಮುತ್ತು ಬಳ್ಳಾರಿ, ಲಕ್ಷ್ಮಣ ತಗಡಿನಮನಿ, ವಿ.ಎಸ್. ಗಟ್ಟಿ, ಬಸವರಾಜ ನವಲಗುಂದ, ದ್ರುವಕುಮಾರ ಹೂಗಾರ, ಆರ್.ವೈ. ಪಾಟೀಲ, ಶಿವನಗೌಡ್ರ ಗೌಡ್ರ ಇದ್ದರು.

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಕನ್ನಡೇತರ ನಾಮಫಲಕ ಅಳವಡಿಸಿದ ಪ್ರತಿಯೊಬ್ಬರೂ ನ.1ರೊಳಗಾಗಿ ನಾಮಫಲಕ ತೆರವುಗೊಳಿಸಿ ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು
ಎರ್ರಿಸ್ವಾಮಿ ಪಿ.ಎಸ್. ತಹಶೀಲ್ದಾರ್