ನರೇಗಲ್: ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದನ್ನು ಸಾಕಷ್ಟು ಜನರು ತಮ್ಮ ಸಾಧನೆಯಿಂದ ತೋರಿಸುತ್ತ ಬಂದಿದ್ದು, ಅದೇ ಸಾಲಿಗೆ ನರೇಗಲ್ ಸಮೀಪದ ಜಕ್ಕಲಿ ಗ್ರಾಮದ ಪ್ರೇಮಾ ಶರಣಪ್ಪ ಮುಕ್ಕಣ್ಣವರ ಸೇರಿದ್ದಾರೆ.
ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮದವರಾದ ಪ್ರೇಮಾ ಅವರ ತಂದೆ ಶರಣಪ್ಪ ಮುದಿಯಪ್ಪ ಮುಕ್ಕಣ್ಣವರ ಹಾಗೂ ತಾಯಿ ಸಾವಿತ್ರಿ ಉದ್ಯೋಗ ಅರಸಿ ಬೆಂಗಳೂರಿಗೆ ವಲಸೆ ಹೋಗಿದ್ದಾರೆ. ಪೀಣ್ಯ 2ನೇ ಹಂತದ ರಾಜಗೋಪಾಲ್ ನಗರದಲ್ಲಿ ನೆಲೆಸಿದ್ದು, ತಂದೆ ಜಾಲಹಳ್ಳಿ ಕ್ಲಾಸ್ ನಲ್ಲಿ ಬೀದಿಬದಿ ವಾಚ್ ಮಾರಾಟ ಮಾಡುತ್ತಾರೆ. ತಾಯಿ ಚಪಾತಿಗಳನ್ನು ಮಾಡಿ ಹೋಟೆಲ್ಗಳಿಗೆ ಪೂರೈಸುತ್ತಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಬೀದಿಬದಿ ವ್ಯಾಪಾರಿಯ ಮಗಳು 11 ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಓದಿಗೆ ಬಡತನ ಅಡ್ಡಿಯಾಗದು ಎಂಬುದನ್ನು ಸಾಬೀತುಪಡಿಸಿದ್ದಾರೆ. ಬುಧವಾರ ಘಟಿಕೋತ್ಸವದಲ್ಲಿ ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗಿದೆ.
ವಿಶ್ವ ವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಷಯದಲ್ಲಿ ವ್ಯಾಸಂಗ ಮಾಡಿರುವ ಎಸ್.ಪ್ರೇಮಾ 11 ಚಿನ್ನದ ಪದಕದ ಸಾಧನೆಗೆ ಪಾತ್ರರಾದವರು. ತಂದೆಯ ಮಾತಿನಂತೆ ಶಿಕ್ಷಕಿಯಾಗಬೇಕು ಎಂಬ ಹಂಬಲದಿಂದ ವರ್ಷಾರಂಭದಿಂದಲೇ ಕಷ್ಟಪಟ್ಟು ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ ಹೀಗಾಗಿ, ಹೆಚ್ಚು ಚಿನ್ನದ ಪದಕಗಳನ್ನು ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಪ್ರೇಮಾ. ಪ್ರಸ್ತುತ ರಾಜಾಜಿನಗರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ ಪದವಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗುವ ಮತ್ತು ಕನ್ನಡ ಸಾಹಿತ್ಯದಲ್ಲಿಯೇ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.