ಲಕ್ಕುಂಡಿ: 2025-26ನೇ ಸಾಲಿನ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ಸೂರ್ಯ ಕಾಂತಿ (ಕೆಬಿಎಸ್ಎಚ್ 78) ತಳಿಯ ಕಿರು ಚೀಲ ವಿತರಣಿ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಬುಧವಾರ ನಡೆಯಿತು.
ಗದಗ ಕೃಷಿ ಇಲಾಖೆಯು ಇಲ್ಲಿಯ ವಿರುಪಾಕ್ಷೇಶ್ವರ ಪ್ರಾಂಗಣದಲ್ಲಿ ರೈತರಿಗೆ ಉಚಿತವಾಗಿ ಸೂರ್ಯಕಾಂತಿ ಬೀಜವನ್ನು ವಿತರಿಸಿತು.
ಕೃಷಿ ಅಧಿಕಾರಿ ಬಸವರಾಜೇಶ್ವರಿ ಸಜ್ಜನರ ಮಾತನಾಡಿ, ‘ಎಣ್ಣೆಕಾಳು ಬೆಳೆಗಳ ವಿಸ್ತೀರ್ಣ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ’ ಎಂದರು.
ಅಟಲ್ ಭೂ ಜಲ ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಗಳು ಲಭ್ಯವಿದ್ದು, ನೀರಾವರಿ ಹಾಗೂ ಕೃಷಿ ಹೊಂಡ ಹೊಂದಿದ ಹಾಗೂ ಹಳ್ಳದ ಪಕ್ಕದಲ್ಲಿ ಜಮೀನು ಹೊಂದಿರುವ ರೈತರು, ಬೆಟಗೇರಿ ರೈತ ಸಂಪರ್ಕ ಕೇಂದ್ರ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಗದಗ ತಾಲ್ಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಡಾ. ಎಂ.ಎಸ್.ಮಲ್ಲಾಪುರ ಮಾತನಾಡಿ, ‘ಕೃಷಿ ಇಲಾಖೆಯೊಂದಿಗೆ ಉತ್ತಮ ಬಾಂಧವ್ಯ ಹೊಂದಿ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಹೂವಣ್ಣವರ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಶ ದೊಂಗಡೆ, ರೈತರಾದ ಚನ್ನಪ್ಪ ಹುಬ್ಬಳ್ಳಿ, ಶಂಕ್ರಪ್ಪ ಕುಂಬಾರ, ಮಂಜುನಾಥ ಸಜ್ಜನರ, ಅಂದಪ್ಪ ಮೆಣಸಿನಕಾಯಿ, ಪಂಚಪ್ಪ ಬಳಿಗೇರ, ಶಿವು ಟೆಂಗಿನಕಾಯಿ, ಬುದ್ಧಿವಂತಪ್ಪ ಹಡಗಲಿ ಸೇರಿದಂತೆ ರೈತ ಬಳಗ ಹಾಜರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.