ADVERTISEMENT

ಗದಗ: ಅಪೌಷ್ಟಿಕತೆ ನಿವಾರಣೆಗೆ ಹೊಸ ಕ್ರಮ

ಗ್ರಾ.ಪಂ ವ್ಯಾಪ್ತಿಯಲ್ಲಿ 100 ಪೌಷ್ಟಿಕಾಂಶ ತೋಟ ನಿರ್ಮಾಣ

ಬಸವರಾಜ ಹಲಕುರ್ಕಿ
Published 20 ಸೆಪ್ಟೆಂಬರ್ 2020, 19:30 IST
Last Updated 20 ಸೆಪ್ಟೆಂಬರ್ 2020, 19:30 IST
ನರಗುಂದ ತಾಲ್ಲೂಕಿನ ಸುರಕೋಡದಲ್ಲಿ ಪ್ರೌಢಶಾಲಾ ಆವರಣದಲ್ಲಿ ನರೇಗಾ ಯೋಜನೆಯಡಿ ಪೌಷ್ಟಿಕಾಂಶ ತೋಟ ನಿರ್ಮಾಣಕ್ಕೆ ಅಧಿಕಾರಿಗಳು ಚಾಲನೆ ನೀಡಿದರು
ನರಗುಂದ ತಾಲ್ಲೂಕಿನ ಸುರಕೋಡದಲ್ಲಿ ಪ್ರೌಢಶಾಲಾ ಆವರಣದಲ್ಲಿ ನರೇಗಾ ಯೋಜನೆಯಡಿ ಪೌಷ್ಟಿಕಾಂಶ ತೋಟ ನಿರ್ಮಾಣಕ್ಕೆ ಅಧಿಕಾರಿಗಳು ಚಾಲನೆ ನೀಡಿದರು   

ನರಗುಂದ: ನರೇಗಾ ಯೋಜನೆಯಡಿ ಗ್ರಾಮ ಪಂಚಾಯ್ತಿ ಮೂಲಕ ಪೌಷ್ಟಿಕಾಂಶ (ನ್ಯೂಟ್ರಿಷಿಯನ್ ಗಾರ್ಡ್‍ನ್) ತೋಟ ನಿರ್ಮಾಣಕ್ಕೆ ಸರ್ಕಾರ ನೆರವು ನೀಡುತ್ತಿದೆ.

ತಾಲ್ಲೂಕಿನಲ್ಲಿ ಈಗಾಗಲೇ ಇಂಥ ತೋಟಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 100 ಪೌಷ್ಟಿಕಾಂಶ ತೋಟ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಡಿ ಫಲಾನುಭವಿಗಳ ಆಯ್ಕೆಗೆ ಗ್ರಾಮ ಪಂಚಾಯ್ತಿ ಮುಂದಾಗಿದೆ. ಜತೆಗೆ ಶಾಲಾ ಆವರಣದಲ್ಲಿ ಇದೇ ರೀತಿಯ ತೋಟಗಳನ್ನು ಈಗಾಗಲೇ ನಿರ್ಮಾಣ ಮಾಡುತ್ತಿದೆ.

‘ಅಪೌಷ್ಟಿಕತೆಯಿಂದ ಸಾಕಷ್ಟು ಜನ ಬಳಲುತ್ತಿದಾರೆ. ಆದ್ದರಿಂದ ಪೌಷ್ಟಿಕಾಂಶಯುಕ್ತ ಆಹಾರ ಅಗತ್ಯವಾಗಿದೆ. ಅದನ್ನು ಮನೆಯಲ್ಲಿ ಸಿದ್ಧ ಮಾಡಿಕೊಳ್ಳಲು ಮನೆ ಆವರಣದಲ್ಲಿ ಪೌಷ್ಟಿಕಾಂಶಯುಕ್ತ ಗಿಡಗಳನ್ನು ಬೆಳೆಸಬೇಕಿದೆ. ಇದರಿಂದ ಎಲ್ಲ ಜೀವಸತ್ವಗಳನ್ನು ಸೇವಿಸಿ ಸದೃಢ ಆರೋಗ್ಯ ಹೊಂದಬಹುದು. ಆದ್ದರಿಂದ ಈ ನರೇಗಾ ಯೋಜನೆಯಡಿ ತಾಲ್ಲೂಕಿನಲ್ಲಿ ಕನಿಷ್ಠ 1,300 ತೋಟ ನಿರ್ಮಿಸುವ ಗುರಿ ಇದೆ. ಇದು ಸರಳ ವಿಧಾನವಾಗಿದೆ’ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ ಹೇಳಿದರು.

ADVERTISEMENT

15 ರೀತಿ ಸಸ್ಯಗಳು: ತೆಂಗು 2, ಕರಿಬೇವು 3, ನಿಂಬೆ 1, ನುಗ್ಗೆ 1, ಮಾವು 1, ಪಪ್ಪಾಯಿ 2 ಸಸಿಗಳು ಸೇರಿದಂತೆ ಒಟ್ಟು 15 ಸಸಿಗಳನ್ನು ತೋಟಗಾರಿಕೆ ಇಲಾಖೆ ಮೂಲಕ ಪಡೆದುಕೊಂಡು ರೈತರು ಪೌಷ್ಟಿಕಾಂಶ ತೋಟ ನಿರ್ಮಾಣ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಆನಂದ ನರಸಣ್ಣವರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.