
ನರೇಗಲ್: ‘ರಾಜ್ಯದ ಅನೇಕ ಮಠಗಳು ಅನ್ನ, ಅಕ್ಷರ, ದಾಸೋಹಕ್ಕೆ ಹೆಸರಾಗಿದ್ದರೆ, ನಿಡಗುಂದಿಕೊಪ್ಪದ ಶ್ರೀಮಠವು ಆರೋಗ್ಯ ದಾಸೋಹಕ್ಕೆ ಹೆಸರಾಗಿದೆ’ ಎಂದು ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ.ಚನ್ನಬಸವ ಸ್ವಾಮೀಜಿ 42ನೇ ಹಾಗೂ ಲಿಂ.ಶಿವಬಸವ ಸ್ವಾಮೀಜಿ ಅವರ 10ನೇ ಪುಣ್ಯಸ್ಮರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಈ ಭಾಗದ ಜನರ ಆರೋಗ್ಯ ಕಾಪಾಡಲೆಂದೆ ಹಾನಗಲ್ ಗುರುಕುಮಾರೇಶ್ವರ ಅವರು ಮಠ ಸ್ಥಾಪಿಸಿ ಚನ್ನಬಸವ ಸ್ವಾಮೀಜಿ ಅವರಿಗೆ ಅನುಗ್ರಹಿಸಿದ್ದಾರೆ. ಮಠವು ಇಂದಿಗೂ ಆರೋಗ್ಯ ಸೇವೆ ಮುಂದುವರೆಸಿಕೊಂಡು ಬಂದಿದೆ’ ಎಂದರು.
ಪೀಠಾಧಿಪತಿ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ‘ಕೆಲವೇ ದಿನಗಳಲ್ಲಿ ಶ್ರೀಮಠದಿಂದ ಚನ್ನಚೇತನ ಗುರುಕುಲ ಶಾಲೆ ಪ್ರಾರಂಭವಾಗಲಿದೆ. 90 ದಿನಗಳ ಉಚಿತ ಹೊಲಿಗೆ ತರಬೇತಿ ನಡೆಯುತ್ತಿದ್ದು, ಜನರು ಪ್ರಯೋಜವ ಪಡೆದುಕೊಳ್ಳಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ ರೋಣ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಅಕ್ಕಿಆಲೂರು ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಜಿ. ಪಾಟೀಲ ಮಾತನಾಡಿದರು.
ಮುಖಂಡರಾದ ವೀರಣ್ಣ ಶೆಟ್ಟರ, ದ್ಯಾಮಣ್ಣ ಮಾಸ್ತರ, ಅನ್ನಪೂರ್ಣಾ ಮನ್ನಾಪೂರ, ಗೀತಾ ಭೋಪಳಾಪೂರ ಆರ್.ವಿ. ಬೆಲ್ಲದ, ಎಸ್.ಎಸ್. ಹಿರೇಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.