ಲಕ್ಷ್ಮೇಶ್ವರ: ಮೈ ಮುರಿದು ದುಡಿದರೂ ಉಳ್ಳಾಗಡ್ಡಿ ಬೆಳೆಗಾರರಿಗೆ ಲಾಭ ಸಿಗುತ್ತಿಲ್ಲ. ಅತಿವೃಷ್ಟಿಯಿಂದಾಗಿ ತೇವಾಂಶ ಹೆಚ್ಚಾಗಿ ಬೆಳೆ ಕೊಳೆರೋಗಕ್ಕೆ ತುತ್ತಾಗಿ ಇಳುವರಿ ಸಾಕಷ್ಟು ಕುಸಿದಿದೆ. ಇಂಥ ಸಮಯದಲ್ಲಿ ಬೆಲೆಯೂ ಪಾತಾಳಕ್ಕೆ ಇಳಿದಿರುವುದು ಅನ್ನದಾತ ಕಣ್ಣೀರು ಹಾಕುವಂತೆ ಮಾಡಿದೆ.
ತಾಲ್ಲೂಕಿನ ಅಡರಕಟ್ಟಿ, ಪುಟಗಾಂವ್ಬಡ್ನಿ, ಮಾಗಡಿ, ಯಳವತ್ತಿ, ಬಟ್ಟೂರ, ಗೊಜನೂರ, ಮಾಡಳ್ಳಿ, ರಾಮಗೇರಿ, ಬಸಾಪುರ, ಗೋವನಾಳ ಮತ್ತಿತರ ಕಡೆಗಳಲ್ಲಿ ಸಾವಿರಾರು ಹೆಕ್ಟೇರ್ನಲ್ಲಿ ಉಳ್ಳಾಗಡ್ಡಿ ಪ್ರತಿವರ್ಷ ಬೆಳೆಯಲಾಗುತ್ತದೆ.
ಕಳೆದ ವರ್ಷ ಉಳ್ಳಾಗಡ್ಡಿಗೆ ಉತ್ತಮ ದರ ಸಿಕ್ಕಿತ್ತು. ಈ ವರ್ಷವೂ ಅದೇ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರು ಈ ವರ್ಷ ಕೂಡ ಉಳ್ಳಾಗಡ್ಡಿ ಬೆಳೆದಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಬೆಳೆದ ಬೆಳೆ ನಂತರ ಸುರಿದ ನಿರಂತರ ಮಳೆಯಿಂದ ಹಾಳಾಗಿದೆ. ಇದೀಗ ಉಳಿದ ಬೆಳೆಯನ್ನಾದರೂ ಕೊಯ್ಲು ಮಾಡಿ ಮಾರಾಟ ಮಾಡಬೇಕೆಂದರೆ ಬೆಲೆ ಕುಸಿದಿದ್ದು, ರೈತರನ್ನು ಕಂಗೆಡಿಸಿದೆ.
ಬೀಜ, ಗೊಬ್ಬರ, ಕ್ರಿಮಿನಾಶಕ, ಔಷಧೋಪಚಾರಕ್ಕಾಗಿ ರೈತರು ಎಕರೆಗೆ ಕನಿಷ್ಠ ₹30 ಸಾವಿರ ಖರ್ಚು ಮಾಡಿದ್ದಾರೆ. ಆದರೆ ಬೆಲೆ ಕುಸಿತದಿಂದಾಗಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಕ್ವಿಂಟಲ್ಗೆ ಕೇವಲ ₹500ರಿಂದ ₹800ಕ್ಕೆ ಮಾರಾಟ ಆಗುತ್ತಿದೆ. ಈ ಬೆಲೆಯಲ್ಲಿ ಮಾರಾಟ ಮಾಡಿದರೆ ರೈತರು ಮಾಡಿದ ಖರ್ಚು-ವೆಚ್ಚವೂ ಬರುವುದಿಲ್ಲ. ಹೀಗಾಗಿ ಅನೇಕ ರೈತರು ಬೆಳೆಯನ್ನು ಜಮೀನಿನಿಂದ ಹೊರ ತೆಗೆಯುವ ಪ್ರಯತ್ನವನ್ನೂ ಮಾಡುತ್ತಿಲ್ಲ.
‘ಕಷ್ಟಪಟ್ಟು ಉಳ್ಳಾಗಡ್ಡಿ ಬೆಳೆದಿದ್ದರೂ ಲಾಭ ಹೋಗಲಿ ಕೊನೆಯ ಪಕ್ಷ ಅಸಲು ಸಹ ರೈತರಿಗೆ ಸಿಗದ ಪರಿಸ್ಥಿತಿ ಇದೆ. ಆದಕಾರಣ ಸರ್ಕಾರ ಕೂಡಲೇ ಉಳ್ಳಾಗಡ್ಡಿ ಬೆಳೆಗಾರರಿಗೆ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು’ ಎಂದು ಭಾರತೀಯ ಕೃಷಿಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.
‘ಮಹಾರಾಷ್ಟ್ರದ ಉಳ್ಳಾಗಡ್ಡಿ ಶೇಖರಣೆ ಇನ್ನೂ ಸಾಕಷ್ಟು ಇದೆ. ಅದು ಮಾರಾಟ ಆಗುವವರೆಗೆ ನಮ್ಮ ಭಾಗದ ಉಳ್ಳಾಗಡ್ಡಿ ಮಾರಾಟ ಆಗುವುದು ಕಡಿಮೆ. ಅಲ್ಲದೆ ರಫ್ತು ಬಂದ್ ಆಗಿದೆ. ಹೀಗಾಗಿ ಉಳ್ಳಾಗಡ್ಡಿ ಬೆಲೆ ಕಡಿಮೆ ಆಗಿದೆ’ ಎಂದು ಠೋಕ ವ್ಯಾಪಾರಸ್ಥರು ಹೇಳುತ್ತಾರೆ.
---
ತೋಟಗಾರಿಕೆ ಕೃಷಿ ಕಂದಾಯ ಇಲಾಖೆಯಿಂದ ಬೆಳೆಹಾನಿ ಕುರಿತು ಜಂಟಿ ಸಮೀಕ್ಷೆ ಮಾಡಲಾಗಿದೆ. ಸಮಗ್ರ ವರದಿ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು..
-ಎಂ. ಧನಜಂಯ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.