ರೋಣ: ಏಳು ವರ್ಷಗಳ ಹಿಂದಿನ ಘಟನೆ. 2012 ಜೂನ್ 16ರಂದು ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ವರದಿಯಾಗಿತ್ತು. ಇದರಿಂದ ದಲಿತರು ಮತ್ತು ಸವರ್ಣೀಯರ ನಡುವೆ ಸಂಘರ್ಷ ತಾರಕಕ್ಕೇರಿತ್ತು. ಆಗ ಸ್ವತಃ ಪೇಜಾವರ ಶ್ರೀಗಳೇ ಗ್ರಾಮಕ್ಕೆ ಬಂದು, ಶಾಂತಿಸಭೆ ನಡೆಸುವ ಮೂಲಕ ಅಸ್ಪೃಶ್ಯತೆ ಆಚರಣೆ ವಿರುದ್ಧ ಜಾಗೃತಿ ಮೂಡಿಸಿದ್ದರು.
ಅಂದು ಗ್ರಾಮಕ್ಕೆ ಬಂದ ಶ್ರೀಗಳು ‘ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬರಿಗೆ ಜೀವಿಸುವ ಹಕ್ಕು ಇದೆ. ಇಲ್ಲಿ ಎಲ್ಲರೂ ಸಮಾನರು. ಗ್ರಾಮದಲ್ಲಿ ಇರುವ ಎಲ್ಲ ಧರ್ಮದ ಜನರು ಸೌಹಾರ್ದತೆಯಿಂದ ಸಹೋದರರಂತೆ ಬಾಳಬೇಕು’ ಎಂದಿದ್ದರು. ಗ್ರಾಮದ ಮುಖಂಡ ಫಕ್ಕೀರಗೌಡ ಸಂಕನಗೌಡ್ರ ಮನೆಗೆ ತೆರಳಿ ಶಾಂತಿಯುತ ಸಹಬಾಳ್ವೆ ನಡೆಸುವಂತೆ ಸೂಚಿಸಿದ್ದರು. ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶ ಮಾಡಿಸಿದ್ದರು.
1984ರಲ್ಲಿ ತಾಲ್ಲೂಕಿನಲ್ಲಿ ತೀವ್ರ ಬರಗಾಲ ಉಂಟಾಗಿತ್ತು. ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಆಗ ಕುರಡಗಿ ಗ್ರಾಮಕ್ಕೆ ಬಂದಿದ್ದ ಶ್ರೀಗಳು ₹ 7 ಲಕ್ಷ ಖರ್ಚು ಮಾಡಿ ಗ್ರಾಮದಲ್ಲಿ ಕೆರೆ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು. ಈ ಮೂಲಕ ಗ್ರಾಮಸ್ಥರಿಗೆ ಕೆಲಸವನ್ನೂ ನೀಡಿ ಅಕ್ಕಿ, ದವಸ ಧಾನ್ಯ, ಕೂಲಿಯನ್ನು ಸಹ ನೀಡಿ ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿದ್ದರು.
ಸ್ವಸಹಾಯ ಗುಂಪುಗಳನ್ನು ಪ್ರಾರಂಭಿಸಿ ಮಹಿಳೆಯರಿಗೆ ಹಣವನ್ನು ಉಳಿತಾಯ ಮಾಡುವ ಕುರಿತು ಮಾರ್ಗದರ್ಶನ ಮಾಡಿದ್ದರು. ಗ್ರಾಮಸ್ಥರಿಗೆ ಆಫ್ರಿಕನ್ ತಳಿಯ 300 ಆಡುಗಳನ್ನು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.