ADVERTISEMENT

ಸಾವಯವ ಕೃಷಿಯಿಂದ ಲಾಭ: ಲಕ್ಷ್ಮೇಶ್ವರದ ಪ್ರಗತಿಪರ ರೈತ ಬಸವರಾಜ ಬೆಂಡಿಗೇರಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 7:27 IST
Last Updated 16 ಫೆಬ್ರುವರಿ 2026, 7:27 IST
ಲಕ್ಷ್ಮೇಶ್ವರ ತಾಲ್ಲೂಕು ಯಳವತ್ತಿಯಲ್ಲಿ ಶನಿವಾರ ನಡೆದ ದ್ವಿತೀಯ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ಡಿಡಿಪಿಐ ಆರ್.ಎಸ್. ಬುರುಡಿ ಮಾತನಾಡಿದರು
ಲಕ್ಷ್ಮೇಶ್ವರ ತಾಲ್ಲೂಕು ಯಳವತ್ತಿಯಲ್ಲಿ ಶನಿವಾರ ನಡೆದ ದ್ವಿತೀಯ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ಡಿಡಿಪಿಐ ಆರ್.ಎಸ್. ಬುರುಡಿ ಮಾತನಾಡಿದರು   

ಲಕ್ಷ್ಮೇಶ್ವರ: ‘ಹೆಚ್ಚಿನ ಖರ್ಚು ಬೇಡದ ಸಾವಯವ ಕೃಷಿಯಿಂದ ಮಾತ್ರ ಲಾಭ ಆಗಬಲ್ಲದು, ಹಾಗಾಗಿ ರೈತರು ಸಾವಯವ ಕೃಷಿಯತ್ತ ಮರಳಬೇಕು’ ಎಂದು ಲಕ್ಷ್ಮೇಶ್ವರದ ಪ್ರಗತಿಪರ ರೈತ ಬಸವರಾಜ ಬೆಂಡಿಗೇರಿ ಹೇಳಿದರು.

ತಾಲ್ಲೂಕಿನ ಯಳವತ್ತಿ ಗ್ರಾಮದಲ್ಲಿ ಶನಿವಾರ ಜರುಗಿದ ದ್ವಿತೀಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಗೋಷ್ಠಿಯಲ್ಲಿ ‘ಸಾವಯವ ಕೃಷಿ ಮಹತ್ವ’ ಕುರಿತು ಮಾತನಾಡಿದರು.

‘ಹಸಿರು ಕ್ರಾಂತಿಯ ನಂತರ ನಮ್ಮ ಪುರಾತನ ಕೃಷಿ ಪದ್ಧತಿಗೆ ಹೊಡೆತ ಬಿದ್ದಿದೆ. ರಾಸಾಯನಿಕ ಗೊಬ್ಬರ ಇಲ್ಲದೆ ಇಂದು ಕೃಷಿ ಇಲ್ಲ ಎನ್ನುವಷ್ಟರ ಮಟ್ಟಿಗೆ ರೈತರು ಈ ಕೃಷಿಗೆ ಹೊಂದಿಕೊಂಡು ಬಿಟ್ಟಿದ್ದಾರೆ. ಆದರೆ ನಿರಂತರವಾಗಿ ರಾಸಾಯನಿಕ ಗೊಬ್ಬರ ಬಳಕೆಯಿಂದಾಗಿ ಬಿತ್ತನೆ ಭೂಮಿ ಹಾಳಾಗುವ ಪರಿಸ್ಥಿತಿ ಬಂದಿದೆ’ ಎಂದು ತಿಳಿಸಿದರು.

ADVERTISEMENT

‘ಮಹಿಳಾ ಸಬಲೀಕರಣ’ ಕುರಿತು ಮಾತನಾಡಿದ ಮಹಿಳಾ ಚಿಂತಕಿ ಮಾಲಾದೇವಿ ದಂಧರಗಿ, ‘ಇಂದಿಗೂ ಸಮಾಜದಲ್ಲಿ ಮಹಿಳೆಯರ ಶೋಷಣೆ ತಪ್ಪಿಲ್ಲ. ಹೆಸರಿಗಷ್ಟೇ ಸಮಾನತೆ ಎನ್ನುತ್ತಾರೆ. ಆದರೆ ಎಲ್ಲ ಕ್ಷೇತ್ರಗಳಲ್ಲೂ ಈಗಲೂ ಹೆಣ್ಣಿನ ಶೋಷಣೆ ನಡೆದೇ ಇದೆ. ರಾಜಕೀಯ ರಂಗದಲ್ಲಂತೂ ಶೋಷಣೆ ಇನ್ನಷ್ಟು ಹೆಚ್ಚಾಗಿದೆ’ ಎಂದು ಹೇಳಿದರು.

‘ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳ ಸಾಹಿತ್ಯದ ಅಗತ್ಯತೆ’ ಕುರಿತು ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ‘ಇಂಗ್ಲಿಷ್‍ ವ್ಯಾಮೋಹದಿಂದಾಗಿ ಇಂದು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಮಕ್ಕಳು ಕನಿಷ್ಠ ಎಸ್‍ಎಸ್‍ಎಲ್‍ಸಿವರೆಗಾದರೂ ಕನ್ನಡದಲ್ಲಿ ಶಿಕ್ಷಣ ಪಡೆಯವ ವ್ಯವಸ್ಥೆ ಬರಬೇಕು’ ಎಂದು ತಿಳಿಸಿದರು.

ಸಮ್ಮೇಳನದ ಅಧ್ಯಕ್ಷರಾದ ಲಲಿತಕ್ಕ ಕೆರಿಮನಿ, ಪೂರ್ಣಾಜಿ ಖರಾಟೆ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬಿ.ಎಸ್. ಬಾಳೇಶ್ವರಮಠ ಆಶಯ ನುಡಿ ಹೇಳಿದರು. ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಉದ್ಘಾಟನಾ ನುಡಿ ನುಡಿದರು.

ಫಕ್ಕೀರೇಶ ಮ್ಯಾಟಣ್ಣವರ, ಕೋಟೆಪ್ಪ ವರ್ದಿ, ಶಕುಂತಲಾ ಹೊರಟ್ಟಿ, ಲತಾ ತಟ್ಟಿ, ಶಕುಂತಲಾ ಅಳಗವಾಡಿ, ಸಿದ್ಧಲಿಂಗೇಶ ರಗಟಿ, ಡಿ.ವೈ. ಹುನಗುಂದ ಮತ್ತಿತರರು ಇದ್ದರು.

ರಾಸಾಯನಿಕ ಗೊಬ್ಬರ ಕ್ರಿಮಿನಾಶಕ ಬಳಕೆಯನ್ನು ರೈತರು ಕಡಿಮೆ ಮಾಡಬೇಕು. ಸಾವಯವ ಕೃಷಿಯಿಂದ ವಿಷಮುಕ್ತ ಆಹಾರ ಬೆಳೆದು ದೇಶದ ಜನರ ಆರೋಗ್ಯ ಕಾಪಾಡಬೇಕು
ಆರ್.ಎಸ್. ಬುರುಡಿ ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.