ಲಕ್ಷ್ಮೇಶ್ವರ: ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮದ ಸರ್ವೆ ನಂ.128\ಬಿ ಈ ಜಾಗೆಯಲ್ಲಿ ಶುಕ್ರವಾರ ಗ್ರಾಮ ಪಂಚಾಯ್ತಿ ವತಿಯಿಂದ ಸಾರ್ವಜನಿಕ ಶೌಚಾಲಯಕ್ಕೆ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸರ್ವೆ ನಂಬರ್ನಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಿವಾಸಿಗಳು ಇಲ್ಲಿ ಶೌಚಾಲಯ ನಿರ್ಮಿಸುವುದು ಬೇಡ. ಬೇರೆ ಕಡೆ ನಿರ್ಮಿಸಬೇಕು ಎಂದು ಪಟ್ಟು ಹಿಡಿದರು.
ಅಧಿಕಾರಿಗಳು ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲವಾದವು. ಕೊನೆಗೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಪೊಲೀಸ್ರೊಂದಿಗೆ ಸ್ಥಳಕ್ಕೆ ಆಗಮಿಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವಾಸಿಗಳ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ನಿವಾಸಿಗಳು ನಮ್ಮ ಓಣಿಯಲ್ಲಿ ಶೌಚಾಲಯ ನಿರ್ಮಿಸುವುದು ಬೇಡ. ರಸ್ತೆ ಬದಿಗೆ ನಿರ್ಮಿಸಿರಿ ಎಂದು ಹೇಳಿದರು.
‘ರಸ್ತೆ ಬದಿಗೆ ಶೌಚಾಲಯ ನಿರ್ಮಿಸಿದರೆ ಮುಂದೆ ರಸ್ತೆ ನಿರ್ಮಿಸುವಾಗ ಲೋಕೋಪಯೋಗಿ ಇಲಾಖೆಯವರು ಶೌಚಾಲಯ ಒಡೆದು ಹಾಕಬೇಕಾಗುತ್ತದೆ. ಕಾರಣ ನಾಗರಿಕ ಸೌಲಭ್ಯಕ್ಕಾಗಿ ಕಾಯ್ದಿರಿಸಿದ ಜಾಗೆಯಲ್ಲಿಯೇ ಶೌಚಾಲಯ ನಿರ್ಮಿಸಿದರೆ ನಿವಾಸಿಗಳಿಗೂ ಅನುಕೂಲ ಆಗುತ್ತದೆ’ ಎಂದು ತಿಳಿ ಹೇಳಿದರು.
ನಂತರ ನಿವಾಸಿಗಳು ಅಧಿಕಾರಿ ಮಾತಿಗೆ ಬೆಲೆ ಕೊಟ್ಟು ಅಲ್ಲಿಯೇ ಶೌಚಾಲಯ ನಿರ್ಮಿಸಲು ಅನುಮತಿ ನೀಡಿದರು. ಸಧ್ಯ ಪೊಲೀಸ್ ಸುಪರ್ದಿಯಲ್ಲಿ ಶೌಚಾಲಯದ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಯಬಾರದು ಎಂಬ ಕಾರಣಕ್ಕಾಗಿ ಪೊಲೀಸ್ ವಾಹನ ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.