ಲಕ್ಷ್ಮೇಶ್ವರ: ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಪಟ್ಟಣದ ದುಂಡಿಬಸವೇಶ್ವರ ದೇವಸ್ಥಾನದ ಹತ್ತಿರದ ಮೈದಾನದಲ್ಲಿ ಟಗರಿನ ಕಾಳಗ ನಡೆಯಿತು.
ಗದಗ, ಹಾವೇರಿ, ಬಾಗಲಕೋಟೆ, ದಾವಣಗೆರೆ, ವಿಜಯಪುರ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಟಗರುಗಳ ಮಾಲೀಕರು ಕಾದಾಟದಲ್ಲಿ ಪಾಲ್ಗೊಂಡಿದ್ದರು.
ಹಾಲು ಹಲ್ಲು, 2 ಹಲ್ಲು, 4 ಹಲ್ಲು, 6 ಹಲ್ಲು ಮತ್ತು 8 ಹಲ್ಲುಗಳ ಟಗರುಗಳು ಕಾಳಗದಲ್ಲಿ ತಮ್ಮ ಶಕ್ತಿ ಪ್ರದರ್ಶನ ನೀಡಿದ್ದು ವಿಶೇಷವಾಗಿತ್ತು.
ಟಗರುಗಳು ಒಂದಕ್ಕೊಂದು ಗುದ್ದುವುದರ ಮೂಲಕ ಕಾಳಗ ನಡೆಸಿ ನೆರೆದಿದ್ದ ನೂರಾರು ಜನರಲ್ಲಿ ರೋಮಾಂಚನ ಮೂಡಿಸಿದವು. ಪ್ರೇಕ್ಷಕರು ಕಣದೊಳಗೆ ಬಾರದಂತೆ ವ್ಯವಸ್ಥಾಪಕರು ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದರು.
ವೇದಿಕೆಯ ಜಿಲ್ಲಾ ಘಟಕದ ಪ್ರಧಾನಕಾರ್ಯದರ್ಶಿ ಶರಣು ಗೋಡಿ ಕಾಳಗ ಉದ್ಘಾಟಿಸಿ ‘ಈ ಹಿಂದೆ ವೇದಿಕೆ ವತಿಯಿಂದ ಯಶಸ್ವಿಯಾಗಿ ಕ್ರಿಕೆಟ್ ಟೂರ್ನಿ ಸಂಘಟಿಸಲಾಗಿತ್ತು. ಕೊರೊನಾ ಕಾರಣದಿಂದಾಗಿ ಯುವ ಜನರಲ್ಲಿ ಮನರಂಜನೆಯೇ ಕಡಿಮೆ ಆಗಿದೆ. ಅವರಲ್ಲಿ ಮತ್ತೆ ಹುರುಪು ತುಂಬುವ ಉದ್ಧೇಶದಿಂದ ಕ್ರೀಡೆಗಳನ್ನು ವೇದಿಕೆ ವತಿಯಿಂದ ಸಂಘಟಿಸಲಾಗುತ್ತಿದೆ’ ಎಂದರು.
‘ಟಗರಿನ ಕಾಳಗ ಒಂದು ಪುರಾತನ ಕ್ರೀಡೆ ಆಗಿದೆ. ಇಂಥ ಕ್ರೀಡೆಗಳು ಜನರಲ್ಲಿ ಪ್ರಾಣಿಗಳ ಬಗ್ಗೆ ಗೌರವ ಭಾವನೆ ಮೂಡಿಸುತ್ತವೆ’ ಎಂದರು.
ಈ ಸಂದರ್ಭದಲ್ಲಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ ಅಮರಾಪುರ, ನಗರ ಘಟಕದ ಅಧ್ಯಕ್ಷ ಅಪ್ಪು ಉಮಚಗಿ, ಲಕ್ಷ್ಮೇಶ್ವರ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಆಶ್ಪಾಕ್ ಬಾಗೋಡಿ, ಮುಜಾಮಿಲ್ ಬೇಫಾರಿ, ನಗರ ಘಟಕದ ಯುವ ಘಟಕದ ಅಧ್ಯಕ್ಷ ಪ್ರಕಾಶ ಉದ್ದನಗೌಡ್ರ, ರಾಮು ನಾಯ್ಕರ್, ಶಂಕರಗೌಡ ಪಾಟೀಲ, ಪ್ರವೀಣ ಗಾಣಿಗೇರ, ಸುಲೇಮಾನ್ ಬೂದಿಹಾಳ, ದುದ್ದು ಅಕ್ಕಿ, ಖೈಸರ್ ಮಹಮ್ಮದಲಿ, ಮೈನು ಮನಿಯಾರ್, ದ್ಯಾಮೇಶ ಬಾರ್ಕಿ, ಮುತ್ತುರಾಜ ಅಮರಾಪುರ, ಕಾರ್ತಿಕ ಗುಡಗೇರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.