ADVERTISEMENT

ಕೂದಲು ಕತ್ತರಿಸಲು ನಿರಾಕರಣೆ: ಅಸ್ಪೃಶ್ಯತೆ ಆರೋಪ

​ಪ್ರಜಾವಾಣಿ ವಾರ್ತೆ
Published 12 ಮೇ 2021, 21:45 IST
Last Updated 12 ಮೇ 2021, 21:45 IST

ಲಕ್ಷ್ಮೇಶ್ವರ(ಗದಗ): ಸಮೀಪದ ಕುಂದ್ರಳ್ಳಿ ಗ್ರಾಮದಲ್ಲಿ ಹರಿಜನಕೇರಿ ನಿವಾಸಿಗಳ ಕೂದಲು ಕತ್ತರಿಸಲು ನಿರಾಕರಿಸಿದ ಸಲೂನ್ ಅಂಗಡಿ ಮಾಲೀಕನ ವಿರುದ್ಧ ಮಂಗಳವಾರ ಕೇರಿಯ ಯುವಕರು ಅಸ್ಪೃಶ್ಯತೆ ಆರೋಪ ಮಾಡಿದ್ದಾರೆ.

ಗ್ರಾಮದಲ್ಲಿ ಅಂದಾಜು 50ಕ್ಕೂ ಹೆಚ್ಚು ಹರಿಜನ ಕುಟುಂಬಗಳು ಇದ್ದು, ಮಂಗಳವಾರ ಕೆಲ ಯುವಕರು ಅಂಗಡಿಗೆ ಬಂದು ಕೂದಲು ಕತ್ತರಿಸಲು ಒತ್ತಾಯಿಸಿದರು. ಆದರೆ, ಅಂಗಡಿಯವರು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ಯುವಕರು ಮತ್ತು ಅಂಗಡಿಯವರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ‘ಊರಿನ ದೈವದವರು ಒಪ್ಪಿಗೆ ಕೊಟ್ಟರೆ ಮಾತ್ರ ನಿಮಗೆ ಕಟಿಂಗ್ ಮಾಡುತ್ತೇನೆ’ ಎಂದು ಅಂಗಡಿ ಮಾಲೀಕ ಹೇಳಿದರು. ಇದರಿಂದ ಆಕ್ರೋಶಗೊಂಡ ಯುವಕರು ಕೇರಿಯ ನಿವಾಸಿಗಳ ಕೂದಲು ಕತ್ತರಿಸಲು ನಿರಾಕರಿಸಲಾಗುತ್ತಿದ್ದು, ಗ್ರಾಮದಲ್ಲಿ ಅಸ್ಪೃಶ್ಯತೆ ಈಗಲೂ ಜೀವಂತವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕರ ಸ್ವಕ್ಷೇತ್ರ ಕುಂದ್ರಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಇದಕ್ಕೆ ಸಲೂನ್ ಅಂಗಡಿಯವರ ವರ್ತನೆಯೇ ಸಾಕ್ಷಿಯಾಗಿದೆ’ ಎಂದು ಸಂಕದಾಳ ಗ್ರಾಮದ ನಿವಾಸಿ ವಕೀಲ ಮೈಲಾರೆಪ್ಪ ಡಿ.ಎಚ್. ಆರೋಪಿಸಿದ್ದಾರೆ.

ADVERTISEMENT

‘ಈವರೆಗೆ ಊರಿನ ಕೇರಿಯ ಜನ ನಮ್ಮ ಅಂಗಡಿಗೆ ಒಮ್ಮೆಯೂ ಬಂದಿಲ್ಲ. ಅವರೆಲ್ಲ ಲಕ್ಷ್ಮೇಶ್ವರಕ್ಕೆ ಹೋಗಿ ಬರುತ್ತಿದ್ದರು. ಈಗ ಏಕಾಏಕಿ ಬಂದು ಹೀಗೆ ಹೇಳುತ್ತಿದ್ದಾರೆ’ ಎಂದು ಸಲೂನ್ ಅಂಗಡಿ ಮಾಲೀಕರು ತಿಳಿಸಿದರು.

ವಿಷಯ ತಿಳಿದ ಲಕ್ಷ್ಮೇಶ್ವರ ಠಾಣೆ ಪೊಲೀಸರು ಅಂಗಡಿಯವರನ್ನು ಕರೆಸಿ ಎಲ್ಲರಿಗೂ ಕೂದಲು ಕತ್ತರಿಸುವಂತೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.