ADVERTISEMENT

ಸದಾಶಿವ ವರದಿ: ಬಹಿರಂಗ ಚರ್ಚೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 2:33 IST
Last Updated 22 ಸೆಪ್ಟೆಂಬರ್ 2020, 2:33 IST
ಬಹಿರಂಗ ಚರ್ಚೆ ಇಲ್ಲದೆ ಸದಾಶಿವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಶಿರಸ್ತೇದಾರ್ ಎಸ್.ಎಸ್.ಬಿಚ್ಚಾಲಿ ಅವರಿಗೆ ಮನವಿ ಸಲ್ಲಿಸಿದರು
ಬಹಿರಂಗ ಚರ್ಚೆ ಇಲ್ಲದೆ ಸದಾಶಿವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಶಿರಸ್ತೇದಾರ್ ಎಸ್.ಎಸ್.ಬಿಚ್ಚಾಲಿ ಅವರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ಬಹಿರಂಗವಾಗಿ ಚರ್ಚೆ ನಡೆಸದೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಒತ್ತಾಯಿಸಿ ಪಟ್ಟಣದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಸದಸ್ಯರು ಸೋಮವಾರ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಎಸ್.ಎಸ್.ಬಿಚ್ಚಾಲಿ ಅವರಿಗೆ ಮನವಿ ಸಲ್ಲಿಸಿದರು.

ನಾಡಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಏಕತೆ ನಾಶ ಮಾಡಲು ಕೆಲವು ದುಷ್ಟಶಕ್ತಿಗಳು ಪ್ರಯತ್ನಿಸುತ್ತಿವೆ. ಮೀಸಲಾತಿ ಕುರಿತಂತೆ ನಮ್ಮ ನಮ್ಮಲ್ಲಿ ಒಡಕು ಮೂಡಿಸಿ ಒಡೆದು ಆಳುವ ನೀತಿಯನ್ನು ಅನುಸರಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದರು.

ಸದಾಶಿವ ಆಯೋಗದ ವರದಿ ಅವೈಜ್ಞಾನಿಕವಾಗಿದ್ದು, ಪಾರದರ್ಶಕವಾಗಿ ಸಮೀಕ್ಷೆ ಮಾಡಲಾಗಿಲ್ಲ. ಇದರಿಂದಾಗಿ ವಿವಿಧ ಸಮುದಾಯಗಳಿಗೆ ಸೇರಿದ ಜನರಿಗೆ ತುಂಬಾ ಅನ್ಯಾಯವಾಗುತ್ತದೆ. ಆಯೋಗದ ವರದಿಯನ್ನು ಸಮಗ್ರವಾಗಿ ಪರಿಶೀಲಿಸಬೇಕು. ಸಾಧ್ಯವಾದರೆ ಮನೆ ಮನೆಗಳಿಗೆ ತೆರಳಿ ಪುನಃ ಸಮೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.

ADVERTISEMENT

ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೆ ಬಿಡಬೇಕು. ಪರಿಶಿಷ್ಟ ಜಾತಿಯ 101 ಸಮುದಾಯಗಳಿಗೆ ವರದಿಯ ಪ್ರತಿಯನ್ನು ನೀಡಬೇಕು. ಆಕ್ಷೇಪಣೆ, ತಕರಾರು, ಮತ್ತು ನ್ಯಾಯಸಮ್ಮತ ತಿದ್ದುಪಡಿಗಳನ್ನು ಸೂಚಿಸಲು ಸಾಕಷ್ಟು ಕಾಲಾವಕಾಶ ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ಶಿಫಾರಸು ಮಾಡಿರುವ ನ್ಯಾಯಮೂರ್ತಿ ನಾಗಮೋಹನದಾಸ ಅವರ ವರದಿಯನ್ನು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲ ಜಾತಿ, ಜನಾಂಗ, ಬುಡಕಟ್ಟುಗಳ ವಾಸ್ತವ ಸ್ಥಿತಿಗತಿಗಳನ್ನು ಅರಿಯಲು ಹಿಂದಿನ ಸರ್ಕಾರ ಕೈಗೊಂಡ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಬಿಡಗಡೆ ಮಾಡಬೇಕು. ಇಲ್ಲದಿದ್ದರೆ ನಾಡಿನಾದ್ಯಂತ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಸುಭಾಷ ಗುಡಿಮನಿ, ಮನೋಜ ರಾಠೋಡ, ಸಿ.ಪಿ.ಬೊಮ್ಮನಪಾಡ, ರಾಮು ಭಜಂತ್ರಿ, ಪರಶುರಾಮ ಕರಡಿಕೊಳ್ಳ, ನಾಗರಾಜ ಗುಡಿಮನಿ, ಸುರೇಶ ಮಾಳಗಿಮನಿ, ಎಲ್ಲಪ್ಪ ಹೂಲಗೇರಿ, ಪ್ರಕಾಶ ಭಜಂತ್ರಿ, ನಾಗರಾಜ ಪವಾರ, ರಾಜು ಡಾವಣಗೇರಿ, ಮನೋಜ ರಾಠೋಡ, ವೈ.ಟಿ.ರಾಠೋಡ, ಕೃಷ್ಣ ಲಮಾಣಿ, ಪ್ರವೀಣ ಚವಾಣ, ಎಚ್.ಎಲ್.ಭಜಂತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.